

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಸೋಮವಾರ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೆ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕತ್ವದಿಂದ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಸುಮಾರು 20 ಮಂದಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಂತಿಮ ಪಟ್ಟಿಗೆ ಇಂದೇ ಕಾಂಗ್ರೆಸ್ ಹೈಕಮಾಂಡ್ ಮುದ್ರೆ ಬೀಳುವ ನಿರೀಕ್ಷೆಯಿದ್ದು, ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ತೀವ್ರ ನಿರೀಕ್ಷೆ ಮತ್ತು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು 20 ಶಾಸಕರ ಅಂತಿಮ ಪಟ್ಟಿಯೊಂದಿಗೆ ಇಂದು ಸಂಜೆ ಕೇರಳದಿಂದ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಭವನದಲ್ಲಿ ಸೋಮವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.
ಇದರ ನಡುವೆ ಸಚಿವ ಸ್ಥಾನಾಕಾಂಕ್ಷಿಗಳು ತಮ್ಮ ಕೊನೆಯ ಹಂತದ ಲಾಬಿಯನ್ನು ತೀವ್ರಗೊಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಕಾವೇರಿ ನಿವಾಸದಲ್ಲಿ ಹಲವು ಶಾಸಕರು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಮನವಿ ಸಲ್ಲಿಸಿದರು.
ಶಾಸಕರಾದ ಯಶವಂತರಾಯಗೌಡ ಪಾಟೀಲ, ಅಪ್ಪಾಜಿ ನಾಡಗೌಡ, ರಿಜ್ವಾನ್ ಅರ್ಷದ್, ವಿಜಯಾನಂದ ಕಾಶಪ್ಪನವರ್, ಎ.ಎಸ್. ಪೊನ್ನಣ್ಣ, ಯಾಸಿರ್ ಅಹ್ಮದ್ ಖಾನ್ ಪಠಾಣ್, ಅಶೋಕ್ ಎಸ್. ಪಟ್ಟಣ ಸೇರಿದಂತೆ ಹಲವರು ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಸಾರಿಗೆ ಸಚಿವ ಬೈರತಿ ಸುರೇಶ್ ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದರು.
ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭಾವ್ಯ ಸಚಿವರ ಪಟ್ಟಿ ಇಂತಿದೆ..
ಅಜಯ್ ಧರ್ಮಸಿಂಗ್ (ಕಲಬುರಗಿ)
ಯಶವಂತರಾಯಗೌಡ ಪಾಟೀಲ (ಇಂಡಿ)
ಟಿ. ರಘುಮೂರ್ತಿ (ಚಳ್ಳಕೆರೆ)
ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ)
ಶಿವರಾಜ ತಂಗಡಗಿ (ಕನಕಗಿರಿ)
ಸಲೀಂ ಅಹ್ಮದ್ (ವಿಧಾನ ಪರಿಷತ್)
ಎನ್.ಎಸ್. ಬೋಸರಾಜು (ವಿಧಾನ ಪರಿಷತ್)
ಸಂತೋಷ್ ಲಾಡ್ (ಕಲಘಟಗಿ)
ಎಸ್.ಎಸ್. ಮಲ್ಲಿಕಾರ್ಜುನ (ದಾವಣಗೆರೆ)
ವಿಜಯಾನಂದ ಕಾಶಪ್ಪನವರ್ (ಬಾಗಲಕೋಟೆ)
ಪುಟ್ಟರಂಗ ಶೆಟ್ಟಿ (ಚಾಮರಾಜನಗರ)
ಎ.ಎಸ್. ಪೊನ್ನಣ್ಣ (ವಿರಾಜಪೇಟೆ)
ಎನ್. ಚೆಲುವರಾಯಸ್ವಾಮಿ (ನಾಗಮಂಗಲ)
ಶಿವಲಿಂಗೇಗೌಡ (ಅರಸೀಕೆರೆ)
ಬಸವರಾಜ ಶಿವಣ್ಣನವರ್ (ಬ್ಯಾಡಗಿ)
ಲಕ್ಷ್ಮಣ ಸವದಿ
ಲಕ್ಷ್ಮೀ ಹೆಬ್ಬಾಳ್ಕರ್
ಡಾ. ಆರತಿ ಕೃಷ್ಣ
ಅನ್ನಪೂರ್ಣ ಇ. ತುಕಾರಂ
ಆನೇಕಲ್ ಶಿವಣ್ಣ
ಇದರ ಜೊತೆಗೆ ಪಿ.ಎಂ. ನರೇಂದ್ರಸ್ವಾಮಿ, ಬಸವಂತಪ್ಪ, ಶರತ್ ಬಚ್ಚೇಗೌಡ, ಕನೀಜ್ ಫಾತಿಮಾ, ತನ್ವೀರ್ ಸೇಠ್ ಅವರ ಹೆಸರೂ ಸಚಿವ ಸ್ಥಾನಕ್ಕೆ ಕೇಳಿಬರುತ್ತಿವೆ.
ಆದರೆ, ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಪ್ರಕಟಿಸಬೇಕಿದ್ದು, ಅದುವರೆಗೆ ಈ ಎಲ್ಲ ಹೆಸರುಗಳು ಊಹಾಪೋಹಗಳ ಪಟ್ಟಿಯಲ್ಲೇ ಉಳಿದಿವೆ.