

ಚೆನ್ನೈ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ(CWRC) ಆದೇಶಗಳನ್ನು ಪಾಲಿಸಲು ಕರ್ನಾಟಕ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ತಮಿಳುನಾಡು ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಅಧಿಕೃತ ಪ್ರಕಟಣೆಯ ಪ್ರಕಾರ, CWMA ಮತ್ತು CWRC ನಿರ್ದೇಶನಗಳನ್ನು ನೀಡಿದ್ದರೂ ಕರ್ನಾಟಕವು ಕಡ್ಡಾಯವಾಗಿ ತಮಿಳುನಾಡಿಗೆ ಬಿಡಬೇಕಾದ ನೀರು ಬಿಡಲು ವಿಫಲವಾಗಿದೆ. ಹೀಗಾಗಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಸೂಚನೆಯ ಮೇರೆಗೆ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಜುಲೈ 28, 2026 ರಂದು ನಡೆದ ತನ್ನ 139ನೇ ಸಭೆಯಲ್ಲಿ, ಕಾವೇರಿ ಜಲಾನಯನ ಪ್ರದೇಶದ ಜಲವಿಜ್ಞಾನ ಮತ್ತು ಹವಾಮಾನ ಪರಿಸ್ಥಿತಿಗಳನ್ನು ನಿರ್ಣಯಿಸಿದ ನಂತರ, ಕರ್ನಾಟಕವು ಜುಲೈ 29 ರಿಂದ ಆಗಸ್ಟ್ 12, 2026 ರವರೆಗೆ ಕೃಷ್ಣ ರಾಜ ಸಾಗರ(ಕೆಆರ್ಎಸ್) ಮತ್ತು ಕಬಿನಿ ಜಲಾಶಯಗಳಿಂದ ಬಿಳಿಗುಂಡ್ಲುವಿಗೆ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನಿರ್ದೇಶಿಸಿತ್ತು. ನಂತರ ಜುಲೈ 30 ರಂದು ನಡೆದ ಸಿಡಬ್ಲ್ಯೂಎಂಎಯ 54 ನೇ ತುರ್ತು ಸಭೆಯಲ್ಲಿ ಈ ನಿರ್ಧಾರವನ್ನು ಅನುಮೋದಿಸಲಾಯಿತು.
ಆದಾಗ್ಯೂ, ಜುಲೈ 29 ಮತ್ತು ಆಗಸ್ಟ್ 2 ರ ನಡುವೆ, ಬಿಳಿಗುಂಡ್ಲುವಿನ ನಿಜವಾದ ಒಳಹರಿವು 158 ರಿಂದ 550 ಕ್ಯೂಸೆಕ್ಗಳ ನಡುವೆ ಮಾತ್ರ ಇತ್ತು. ಇದು ಅಧಿಕಾರಿಗಳು ಆದೇಶಿಸಿದ ಪ್ರಮಾಣಕ್ಕಿಂತ ಬಹಳ ಕಡಿಮೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಈಗ ಹೇಳಿರುವಷ್ಟು ನೀರನ್ನು ತಮಿಳುನಾಡಿಗೆ ನೀಡಲು ಕರ್ನಾಟಕದ ಜಲಾಶಯಗಳಲ್ಲಿ ಸಾಕಷ್ಟು ನೀರು ಲಭ್ಯವಿದೆ ಎಂದು ತಮಿಳುನಾಡು ಸರ್ಕಾರ ವಾದಿಸಿದ್ದು, ಆಗಸ್ಟ್ 3 ರ ಹೊತ್ತಿಗೆ, ಕೃಷ್ಣರಾಜ ಸಾಗರ ಜಲಾಶಯವು 23.078 ಟಿಎಂಸಿ, ಕಬಿನಿ 18.610 ಟಿಎಂಸಿ, ಹಾರಂಗಿ 7.827 ಟಿಎಂಸಿ ಮತ್ತು ಹೇಮಾವತಿ 28.022 ಟಿಎಂಸಿ ನೀರನ್ನು ಹೊಂದಿತ್ತು. ನಾಲ್ಕು ಜಲಾಶಯಗಳಲ್ಲಿ ಒಟ್ಟು ಸಂಗ್ರಹವು 77.537 ಟಿಎಂಸಿ ಆಗಿದ್ದು, ಇದರಲ್ಲಿ 67.517 ಟಿಎಂಸಿ ಬಳಸಬಹುದಾದ ನೀರು ಸೇರಿದೆ ಎಂದು ಹೇಳಿದೆ.
ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಒಳಹರಿವು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಮಿಳುನಾಡು ಹೇಳಿದ್ದು, ಬಿಳಿಗುಂಡ್ಲುವಿನಲ್ಲಿ 26.954 ಟಿಎಂಸಿ ನೀರನ್ನು ಪಡೆಯುವ ಅರ್ಹತೆ ಹೊಂದಿದೆ ಎಂದು ಹೇಳಿಕೊಂಡಿದೆ. ಇದು ಪ್ರಸ್ತುತ ಅವಧಿಗೆ ಸಿಡಬ್ಲ್ಯೂಎಂಎ ನಿರ್ದೇಶಿಸಿದ 4.536 ಟಿಎಂಸಿಗಿಂತ ಗಣನೀಯವಾಗಿ ಹೆಚ್ಚಾಗಿದೆ.
ತಮಿಳುನಾಡಿನ ವಾದದ ಪ್ರಕಾರ, ರಾಜ್ಯಕ್ಕೆ ಅನುಪಾತದ ಆಧಾರದ ಮೇಲೆ 26.954 ಟಿಎಂಸಿ ನೀರು ದೊರಕಬೇಕಿದೆ. ತನ್ನ ಪಾಲಿನ ನೀರನ್ನು ಯಾವುದೇ ವಿಳಂಬವಿಲ್ಲದೆ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ತಮಿಳುನಾಡಿಗೆ ನೀರು ಬಿಡುಗಡೆ
ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಮೈಸೂರು ಜಿಲ್ಲೆಯ ಹೆಮ್ಮೆಯ ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ತಮಿಳುನಾಡಿನತ್ತ ಕಾವೇರಿ ನೀರು ಈ ಜಲಾಶಯದಿಂದ ಹರಿಯಲಾರಂಭಿಸಿದೆ.
ಒಟ್ಟು 19.52 ಟಿಎಂಸಿ ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಈಗಾಗಲೇ 18 ಟಿಎಂಸಿ ನೀರು ಸಂಗ್ರಹಗೊಂಡಿದೆ. ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಜಲಾಶಯದ 4 ಕ್ರಸ್ಟ್ ಗೇಟ್ಗಳ ಮೂಲಕ ಸುಮಾರು 10 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸುತ್ತಿದ್ದಾರೆ. ಈ ನೀರು ಕಪಿಲಾ ನದಿಯ ಮೂಲಕ ತಮಿಳುನಾಡಿನತ್ತ ಹರಿದು ಹೋಗಲಿದೆ.