

ಮೈಸೂರು: ಲೇಡಿ ಸೂಪರ್ವೈಸರ್ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸನಿವಾರ ಮೈಸೂರಿನ ಹಿನಕಲ್ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ನಾಗೇಶ್ವರಿ ಎಂದು ಗುರುತಿಸಲಾಗಿದೆ. ನಾಗೇಶ್ವರಿ ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ʻಡಾಲಿʼ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಶ್ವರಿ ಅವರು, ತನ್ನದಲ್ಲದ ತಪ್ಪಿಗೆ ಕಂಪನಿಯಲ್ಲಿ ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ನಾಲ್ಕು ತಿಂಗಳ ಹಿಂದಷ್ಟೇ ಕಂಪನಿಗೆ ʻಡಾಲಿʼ ಎಂಬ ಮಹಿಳೆ ಸೂಪರ್ವೈಸರ್ ಆಗಿ ಬಂದಿದ್ದು, ಅವರಿಂದ ಕಿರುಕುಳ ಶುರುವಾಯ್ತು ಎಂದು ನಾಗೇಶ್ವರಿ ಆರೋಪಿಸಿದ್ದಾರೆ.
ʻನನ್ನದಲ್ಲದ ತಪ್ಪಿಗೆ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿತ್ತು. ಕಳೆದ 4 ತಿಂಗಳಿನಿಂದ ಒಂದು ವೀಕ್ಆಫ್ ಕೂಡ ನೀಡಿಲ್ಲ. ತುರ್ತು ರಜೆ ಕೇಳಿದರೂ ರಜೆ ನೀಡಲಿಲ್ಲ. ಇಷ್ಟೇ ಅಲ್ಲ, ಈ ಬಗ್ಗೆ ಪ್ರಶ್ನೆ ಮಾಡಿದಾಗ ಕೆಲಸದಿಂದಲೇ ತೆಗೆದು ಹಾಕಿದ್ರು. ಕೆಲಸದಿಂದ ತೆಗೆದುಹಾಕಿದ ಬಳಿಕ ನೋಟಿಸ್ ಪಿರಿಯಡ್ ಕೂಡ ಮಾಡಿಸಿಲ್ಲ. ಡಾಲಿ ಮೇಡಂ ನೀಡಿದ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ನಾಗೇಶ್ವರಿ ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾರೆ.
ಕೆಲಸದ ಒತ್ತಡವೋ? ಸೂಪರ್ವೈಸರ್ ಕಿರುಕುಳವೋ? ನಾಗೇಶ್ವರಿಯ ಆತ್ಮಹತ್ಯೆಗೆ ನಿಜವಾದ ಕಾರಣವೇನು ಎಂಬುದು ತನಿಖೆಯಿಂದ ಹೊರಬರಬೇಕಿದೆ.