

ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆದುಕೊಂಡ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ಸಭಾಪತಿ ಸ್ಥಾನಕ್ಕೆ ಹಿರಿಯ ನಾಯಕ ಸಲೀಂ ಅಹ್ಮದ್ ಅವರ ಹೆಸರನ್ನು ಪ್ರಕಟಿಸಿತ್ತು. ಹಾಗಾಗಿ, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದ ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ನಡುವೆಯೇ, ರಾಜ್ಯಪಾಲರು ಮೇಲ್ಮನೆಯ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ನೇಮಕ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ
ಆಗಸ್ಟ್ 14, 2026 ರಂದು ವಿಧಾನ ಪರಿಷತ್ತಿನ ನೂತನ ಸಭಾಪತಿ ಮತ್ತು ಉಪಸಭಾಪತಿಗಳ ಆಯ್ಕೆಗೆ ಅಧಿಕೃತವಾಗಿ ಚುನಾವಣೆ ನಡೆಯಲಿದೆ. ಜೊತೆಗೆ ಉಪಸಭಾಪತಿ ಹುದ್ದೆಯೂ ಖಾಲಿ ಇರುವುದರಿಂದ, ಹೊಸದಾಗಿ ಕಾಯಂ ಸಭಾಪತಿ ಮತ್ತು ಉಪಸಭಾಪತಿಗಳ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಿರಿಯ ಸದಸ್ಯರಾದ ಪುಟ್ಟಣ್ಣ ಅವರನ್ನ ನೇಮಕ ಮಾಡಿ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಹೊಸ ಸಭಾಪತಿ ಆಯ್ಕೆ ಆಗುವವರೆಗೂ ಸದನದ ಪ್ರಕ್ರಿಯೆಗಳು ಸಲೀಸಾಗಿ ಮುಂದುವರಿಯಲಿವೆ.
ಮುಂದಿನ ಸಭಾಪತಿ-ಉಪಸಭಾಪತಿ ಯಾರು?
ಕಾಂಗ್ರೆಸ್ ಅಭ್ಯರ್ಥಿ: ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ವಿಧಾನ ಪರಿಷತ್ ಸಭಾಪತಿ ಸ್ಥಾನದ ಅಧಿಕೃತ ಅಭ್ಯರ್ಥಿಯಾಗಿ ತನ್ನ ಹಿರಿಯ ನಾಯಕ ಸಲೀಂ ಅಹ್ಮದ್ ಹೆಸರನ್ನು ಪ್ರಕಟಿಸಿದೆ.
ಉಪಸಭಾಪತಿ ಅಭ್ಯರ್ಥಿ: ಉಪಸಭಾಪತಿ ಸ್ಥಾನಕ್ಕೆ ಮಾಜಿ ಸಚಿವೆ ಉಮಾಶ್ರೀ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇದರ ನಡುವೆಯೇ, ಉಮಾಶ್ರೀ ಅವರು ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಮಹಿಳಾ ಕೋಟಾದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿದ್ದಾರೆ.
ಮೇಲ್ಮನೆಯ ಹಾಲಿ ಬಲಾಬಲ ಹೇಗಿದೆ?
ಕರ್ನಾಟಕ ವಿಧಾನ ಪರಿಷತ್ತಿನಲ್ಲಿ (ಮೇಲ್ಮನೆ) ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಒಟ್ಟು 75 ಸ್ಥಾನಗಳ ಪೈಕಿ 38 ಸ್ಥಾನಗಳನ್ನು ಹೊಂದುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಇದರೊಂದಿಗೆ ಮೇಲ್ಮನೆಯಲ್ಲಿ ಕಾಂಗ್ರೆಸ್ 38, ಬಿಜೆಪಿ 24, ಜೆಡಿಎಸ್ 6, ಪಕ್ಷೇತರ 1 ಹಾಗೂ 5 ಸ್ಥಾನಗಳು ಖಾಲಿ ಇವೆ.