

ಮಡಿಕೇರಿ: ಕಾಂಕ್ರೀಟ್ ಸ್ಲ್ಯಾಬ್ ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಶೌಚಾಲಯದ ಗುಂಡಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹೋಸತೋಟ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಮೃತರನ್ನು ಹೊಸತೋಟ ಗ್ರಾಮದ ದಿನಗೂಲಿ ಕಾರ್ಮಿಕ ಮಹಿಳೆ ನಿತ್ಯಾ(50) ಮತ್ತು ಗರಗಂದೂರು ನಿವಾಸಿ ಜನಾರ್ಧನ್(45) ಎಂದು ಗುರುತಿಸಲಾಗಿದೆ.
ಧರ್ಮಪ್ಪ ಅವರ ಪತ್ನಿ ನಿತ್ಯಾ ಅವರು ತಮ್ಮ ಸೋದರ ಮಾವ ವಾಸು ಅವರ ಮನೆಯಿಂದ ಮನೆ ಬಳಕೆಗೆ ಶುಂಠಿ ತರಲೆಂದು ತೆರಳಿದ್ದಾಗ ಈ ಅನಾಹುತ ಸಂಭವಿಸಿದೆ.
ಮನೆಯ ಹಿಂದೆ ನಡೆದುಕೊಂಡು ಹೋಗುತ್ತಿದ್ದಾಗ ಹಳೆಯದಾಗಿದ್ದ ಶೌಚಾಲಯದ ಗುಂಡಿಯ ಮೇಲ್ಭಾಗದ ಕಾಂಕ್ರೀಟ್ ಸ್ಲ್ಯಾಬ್ ಏಕಾಏಕಿ ಕುಸಿದಿದ್ದರಿಂದ ನಿತ್ಯ ಅವರು ಗುಂಡಿಯೊಳಗೆ ಬಿದ್ದಿದ್ದಾರೆ. ಇದನ್ನು ಕಂಡ ಜನಾರ್ದನ ಅವರು ತಕ್ಷಣವೇ ಆಕೆಯ ರಕ್ಷಣೆಗೆ ಧಾವಿಸಿ ಗುಂಡಿಯೊಳಗೆ ಇಳಿದಿದ್ದಾರೆ. ಆದರೆ, ರಕ್ಷಣಾ ಪ್ರಯತ್ನದ ವೇಳೆ ಜನಾರ್ದನ ಸಹ ಗುಂಡಿಯೊಳಗೆ ಸಿಲುಕಿಕೊಂಡಿದ್ದಾರೆ.
ಗುಂಡಿಯೊಳಗೆ ಸಂಗ್ರಹವಾಗಿದ್ದ ತೀವ್ರತರವಾದ ವಿಷಕಾರಿ ಅನಿಲವನ್ನು ಸೇವಿಸಿದ ಪರಿಣಾಮ ಇಬ್ಬರೂ ಉಸಿರುಗಟ್ಟಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸುಂಟಿಕೊಪ್ಪ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ನಿತ್ಯಾ ಅವರು ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದು, ಜನಾರ್ದನ್ ಅವರು, ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.