

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅಡಿಯಲ್ಲಿ ಮತಗಟ್ಟೆ ಅಧಿಕಾರಿಗಳು, ಮತದಾರರ ಮನೆಗೆ ಭೇಟಿ ನೀಡುವ ಅವಧಿಯನ್ನು ಇನ್ನೂ ಒಂದು ತಿಂಗಳು ವಿಸ್ತರಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಎಸ್ಐಆರ್ ಭಾಗವಾಗಿ ಅನ್ಬುಕುಮಾರ್ ಅವರು ಬುಧವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆಗೆ ನಡೆಸಿದ ಸಭೆಯಲ್ಲಿ ರಮೇಶ್ ಬಾಬು ಅವರು ಈ ಕುರಿತು ಮನವಿ ಸಲ್ಲಿಸಿದ್ದಾರೆ. ಮತಗಟ್ಟೆ ಅಧಿಕಾರಿಗಳು (ಬಿಎಲ್ಒ) ಈವರೆಗೆ 1.11 ಕೋಟಿ ಮತದಾರರನ್ನು ಎಎಸ್ಡಿಡಿಒ ಎಂದು ವರ್ಗೀಕರಿಸಿದ್ದರು.
ರೋಲ್ಬ್ಯಾಕ್ಗೆ ಅವಕಾಶ ನೀಡಿದ ನಂತರ 2 ಲಕ್ಷಕ್ಕೂ ಹೆಚ್ಚು ಮತದಾರರನ್ನು ಈ ವರ್ಗೀಕರಣದಿಂದ ಹೊರಗೆ ತೆಗೆಯಲಾಗಿದೆ. ಇನ್ನೂ 1.08 ಕೋಟಿ ಮತದಾರರ ವಿವರ ಪರಿಶೀಲಿಸಿ, ರೋಲ್ಬ್ಯಾಕ್ ಮಾಡಬೇಕಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ದಿನಗೂಲಿ ಕಾರ್ಮಿಕರು, ವಲಸಿಗರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಅಂಗವಿಕಲ ವ್ಯಕ್ತಿಗಳು ಸೇರಿದಂತೆ ಅನೇಕ ಮತದಾರರು ಬಿಎಲ್ಒ ಭೇಟಿಗಳ ಸಮಯದಲ್ಲಿ ಲಭ್ಯವಿಲ್ಲದಿರಬಹುದು. ಹೀಗಾಗಿ ಅವರನ್ನು ಹೊರಗಿಡಬಾರದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬಿಎಲ್ಒಗಳ ಮನೆ–ಮನೆ ಭೇಟಿ ಆಗಸ್ಟ್ 17ಕ್ಕೆ ಮುಗಿಯಲಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಎಲ್ಲ ಮತದಾರರ ಎಎಸ್ಡಿಡಿಒ ಪಟ್ಟಿಯನ್ನು ಪರಿಶೀಲಿಸಿ, ರೋಲ್ಬ್ಯಾಕ್ ಮಾಡಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ಅವಧಿಯನ್ನು ವಿಸ್ತರಿಸಿ ಎಂದು ಕೋರಿದ್ದಾರೆ.
ಲಭ್ಯವಿಲ್ಲದ ಮತದಾರರನ್ನು ಮತ್ತೆ ಬಿಎಲ್ಒಗಳು ಹೋಗಿ ಭೇಟಿ ಮಾಡಲು ನಿರ್ದೇಶಿಸಬೇಕು ಎಂದು ಮನವಿ ಮಾಡಲಾಗಿದೆ. ಸಾಕಷ್ಟು ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲು, ದುರ್ಬಲ ಗುಂಪುಗಳಿಗೆ ವಿಶೇಷ ಸಹಾಯ ಮಾಡಲು ಮತ್ತು ಕರಡು ಪಟ್ಟಿಯನ್ನು ಪ್ರಕಟಿಸುವ ಮೊದಲು ಸ್ವತಂತ್ರ ಗುಣಮಟ್ಟ-ನಿಯಂತ್ರಣ ಪರಿಶೀಲನೆಯನ್ನು ನಡೆಸಲು ಕೆಪಿಸಿಸಿ ಒತ್ತಾಯಿಸಿದೆ..