

ಬೆಂಗಳೂರು: ಆರ್ ಎಸ್ ಎಸ್ ಚಟುವಟಿಕೆ ನಿಯಂತ್ರಣಕ್ಕೆ ಹೊಸ ವಿಧೇಯಕಕ್ಕೆ ರಾಜ್ಯ ಸರ್ಕಾರ ಮುಂದಾಗಿರುವಂತೆಯೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹಳೆಯ ವಿಡಿಯೋ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಖರ್ಗೆ ಕುಟುಂಬದವರು ಮನಸ್ಸು ಮಾಡಿದರೆ ಬಿಜೆಪಿ ಕಾರ್ಯಕರ್ತರು ಕಲಬುರ್ಗಿ ಜಿಲ್ಲೆಗೆ ಕಾಲು ಇಡುವುದಕ್ಕೂ ಬಿಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಜನಾಬ್ ಪ್ರಿಯಾಂಕ್ ಖರ್ಗೆ ಅವರೇ, ತಮ್ಮ ಬಾಯಲ್ಲಿ ಬಂದ ನುಡಿಮುತ್ತುಗಳನ್ನು ಒಂದು ಸಲ ತಾವೇ ನೆನಪಿಸಿಕೊಳ್ಳಿ ಸ್ವಾಮಿ. ದೇಶಕ್ಕೆ ಸಂವಿಧಾನ, ಪ್ರತಿಯೊಬ್ಬ ನಾಗರಿಕನಿಗೂ ಸಮನಾದ ಮೂಲಭೂತ ಹಕ್ಕುಗಳನ್ನು ಕೊಟ್ಟ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರ ರಕ್ತ ಹರಿಯುತ್ತಿರುವವರು ಆಡುವ ಮಾತಾ ಇದು?ಇದು ಅಂಡರ್ ವರ್ಲ್ಡ್ ಮಾಫಿಯಾದವರು ಬಳಸುವ ಭಾಷೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
Father Quota ದಲ್ಲಿ ಗೃಹ ಸಚಿವರಾದ ಮಾತ್ರಕ್ಕೆ ತಾವು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗಿಂತ ದೊಡ್ಡವರೂ ಅಂದುಕೊಂಡು ಬಿಟ್ಟಿದ್ದೀರಾ? ಅಂಬೇಡ್ಕರ್ ಅವರ ಸಂವಿಧಾನ ಕಲಬುರ್ಗಿಯಲ್ಲಿ ಅನ್ವಯ ಆಗುವುದಿಲ್ಲವೇ? ಅಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಸಿಗುವುದಿಲ್ಲವೇ? ಒಂದು ನೆನಪಿಡಿ. ತಾವೂ ನಿಜಾಮರೂ ಅಲ್ಲ, ನಿಮ್ಮದು ರಜಾಕರರ ಸರ್ಕಾರವೂ ಅಲ್ಲ. ಅಧಿಕಾರದ ಮದದಲ್ಲಿ ಮೈಮರೆತು ತಾವೂಬ್ಬ ಜನಪ್ರತಿನಿಧಿ, ಜನಸೇವಕ ಅನ್ನೋದನ್ನ ಮರೆಯಬೇಡಿ ಎಂದಿದ್ದಾರೆ.
"RSS ಎದುರು ಹಾಕಿಕೊಂಡರೆ ನೀವು ಮನೆಯಿಂದ ಆಚೆ ಬರಲು ಆಗುವುದಿಲ್ಲ" ಎಂದು ನಾನು ಹೇಳಿದ್ದು RSS ಬಗ್ಗೆ ಸಮಾಜದಲ್ಲಿ ಇರುವ ಗೌರವ ಮತ್ತು ಅಭಿಮಾನದ ಬಗ್ಗೆ. RSS ನಂತಹ ಒಂದು ನಿಸ್ವಾರ್ಥ, ರಾಷ್ಟ್ರಭಕ್ತ ಸಂಘಟನೆ ಬಗ್ಗೆ ವಿನಾಕಾರಣ ದ್ವೇಷ ಕಾರಿದರೆ ಜನರೇ ಅದನ್ನು ಒಪ್ಪುವುದಿಲ್ಲ, ಜನರೇ ತಮಗೆ ತಕ್ಕ ಪಾಠ ಕಲಿಸುತ್ತಾರೆ ಎನ್ನುವ ಅರ್ಥದಲ್ಲಿ ನಾನು ಹೇಳಿದ್ದು. ನನ್ನ ಹೇಳಿಕೆಯನ್ನು ತಿರುಚಿ ಸುದ್ದಿಯಲ್ಲಿರುವುದಕ್ಕೆ ಒಂದು ಹೊಸ ಕಾರಣ ಹುಡುಕಿಕೊಳ್ಳುವ ಹತಾಶ ಪ್ರಯತ್ನ ಬಿಡಿ. ಗೃಹ ಸಚಿವ ಸ್ಥಾನ ಕೊಟ್ಟಿರುವುದೇ RSS ಅನ್ನು ಟಾರ್ಗೆಟ್ ಮಾಡುವುದಕ್ಕಾಗಿ ಎನ್ನುವ ಮನಸ್ಥಿತಿಯಿಂದ ಹೊರಬನ್ನಿ ಎಂದು ಒತ್ತಾಯಿಸಿದ್ದಾರೆ.