

ಕಲಬುರಗಿ: 80ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಆರ್ ಎಸ್ ಎಸ್ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಪಾತ್ರವನ್ನು ಪ್ರಶ್ನಿಸಿದ್ದಾರೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧದ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ತಮ್ಮ ಸದಸ್ಯರ ಹೆಸರುಗಳನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದರು.
"ಆರ್ಎಸ್ಎಸ್ಗೆ ನನ್ನ ಏಕೈಕ ಪ್ರಶ್ನೆ ಏನೆಂದರೆ, ನೀವು ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೀರಿ ಎಂಬುದನ್ನು ತಿಳಿಸಿ ಎಂದು ಖರ್ಗೆ ಕೇಳಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ 500 ಕಾಂಗ್ರೆಸ್ ಸದಸ್ಯರ ಪಟ್ಟಿಯನ್ನು ನೀಡಬಲ್ಲೆ, ಅಂತಹ ಕನಿಷ್ಠ 50 ಹೆಸರುಗಳ ಪಟ್ಟಿಯನ್ನಾದರೂ ನೀಡುವಂತೆ ಆರ್ಎಸ್ಎಸ್ಗೆ ಸವಾಲು ಹಾಕಿದ್ದಾರೆ.
ದೇಶ ವಿಭಜನೆಯ ನಂತರ ಉಂಟಾದ ಕೋಮು ಗಲಭೆ ಹೆಚ್ಚುವಲ್ಲಿ ಆರ್ಎಸ್ಎಸ್ ಪಾತ್ರವಿದೆ ಎಂದು ಆರೋಪಿಸಿದ ಖರ್ಗೆ, ಆ ನಂತರ ನಡೆದ ಗಲಭೆಗಳ ಸಂದರ್ಭದಲ್ಲಿ ಜನರನ್ನು ರಕ್ಷಿಸುವಲ್ಲಿ ಆ ಸಂಘಟನೆ ಏನು ಪಾತ್ರ ವಹಿಸಿತು ಎಂದು ಪ್ರಶ್ನಿಸಿದರು. ಆರ್ಎಸ್ಎಸ್ ನೋಂದಣಿಯಾಗಿಲ್ಲದಿರುವುದರಿಂದ ಅದನ್ನು ಸುಲಭವಾಗಿ "ನಿಷೇಧಿಸಲು" ಸಾಧ್ಯವಿಲ್ಲ ಎಂದು ವಾದಿಸುವ ಮೂಲಕ, ಅದರ ಸಾಂಸ್ಥಿಕ ಸ್ಥಾನಮಾನದ ಬಗ್ಗೆಯೂ ಖರ್ಗೆ ಪ್ರಶ್ನೆ ಎತ್ತಿದ್ದಾರೆ.
"ಆರ್ಎಸ್ಎಸ್ ಅನ್ನು ನಿಷೇಧಿಸಲು ಸಾಧ್ಯವಿಲ್ಲ. ಸಂತೋಷ್ ಮತ್ತು ಮೋಹನ್ ಭಾಗವತ್ ಹೇಳಿದ್ದು ಸತ್ಯ: ಅವರನ್ನು ನಿಷೇಧಿಸಲು ಸಾಧ್ಯವಿಲ್ಲ. ಅದಕ್ಕೆ ಕಾರಣವೇನೆಂದರೆ, ಅವರು ನೋಂದಣಿಯೇ ಆಗಿಲ್ಲ. ನಿಮ್ಮ ಸಂಘಟನೆಯನ್ನು ನಾನು ನಿಷೇಧಿಸಬೇಕಾದರೆ, ಮೊದಲು ನೀವು ನೋಂದಣಿಯಾಗಿರಬೇಕಲ್ಲವೇ?" ಎಂದು ಅವರು ಹೇಳಿದರು.ಸಾರ್ವಜನಿಕ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ನಿಯಂತ್ರಿಸುವ ರಾಜ್ಯ ಸರ್ಕಾರದ ಪ್ರಸ್ತಾವಿತ ಕಾನೂನಿನ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಯ ನಡುವೆಯೇ ಪ್ರಿಯಾಂಕ್ ಖರ್ಗೆ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಆರ್ಎಸ್ಎಸ್ (RSS) ಅಷ್ಟೊಂದು ಉತ್ತಮವಾಗಿದ್ದರೆ, ಬಿಜೆಪಿ ನಾಯಕರ ಮಕ್ಕಳು ಏಕೆ ಪೂರ್ಣಕಾಲಿಕ ಪ್ರಚಾರಕರಾಗಿಲ್ಲ ಅಥವಾ ಸ್ವಯಂಸೇವಕರಾಗಿಲ್ಲ? ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮೂಲಕ ವಿಪಕ್ಷ ನಾಯಕ ಆರ್ ಅಶೋಕ್ ಅವರನ್ನು ಪ್ರಶ್ನಿಸಿದ್ದಾರೆ. ನಿಮ್ಮ ಮಕ್ಕಳು ಎಷ್ಟು ಬಾರಿ ಆರ್ಎಸ್ಎಸ್ ಶಾಖೆಗಳಿಗೆ ಭೇಟಿ ನೀಡಿದ್ದಾರೆ? ಇದ್ಯಾವುದಕ್ಕೂ ನೀವು ಉತ್ತರ ನೀಡಲೇ ಇಲ್ಲ.. 'ಕೇಶವ ಕೃಪಾ'ಗೆ ಭೇಟಿ ನೀಡಲು ನನಗೂ ಸಂತೋಷವೇ, ಆದರೆ ಮೊದಲು ಬಿಜೆಪಿ ನಾಯಕರ ಮಕ್ಕಳನ್ನು ಗೋಶಾಲೆಗಳು ಮತ್ತು ಶಾಖೆಗಳಿಗೆ ಕಳುಹಿಸಿ. ನನ್ನನ್ನು ಶಾಖೆಗೆ ಕರೆಯುವ ಮುನ್ನ, ನಿಮ್ಮ ಮಕ್ಕಳನ್ನು ಶಾಖೆಗೆ ಕಳುಹಿಸಿದರೆ 'ನೈತಿಕತೆ'ಯ ಪದಕ್ಕೆ ನಿಮ್ಮಿಂದ ಅರ್ಥ ಬರಬಹುದು! ಎಂದಿದ್ದಾರೆ.
ಅಂದಹಾಗೆ, ರಾಹುಲ್ ಗಾಂಧಿ, ಇಂದಿರಾ ಗಾಂಧಿ ಮತ್ತು ಪಂಡಿತ್ ನೆಹರು ಅವರ ಬಗ್ಗೆ ಚಿಂತಿಸಬೇಡಿ. ಮೊದಲು, ಇತ್ತೀಚಿಗೆ ನಡೆದ ಎಂಎಲ್ಸಿ ಚುನಾವಣೆಯಲ್ಲಿ ನಿಮ್ಮ ಮೈತ್ರಿಕೂಟದ 11 ಮತಗಳು ಹೇಗೆ ಅತ್ತ-ಇತ್ತ ಕ್ರಾಸ್ ವೋಟಿಂಗ್ ಆದವು ಎಂಬುದನ್ನು ತಿಳಿದುಕೊಳ್ಳಿ. ನಿಮಗೆ ಅಗತ್ಯವಿದ್ದರೆ, ನಿಮ್ಮ ಪಕ್ಷದ ಶಾಸಕರಿಗೆ ನಿಮ್ಮ ನಾಯಕತ್ವದ ಮೇಲಿನ ವಿಶ್ವಾಸ ಏಕೆ ಕಡಿಮೆಯಾಗಿದೆ ಎಂಬುದರ ಕುರಿತು ನಾನು ಪರಿಶೀಲಿಸಿ ನಿಮಗೆ ತಿಳಿಸಬಲ್ಲೆ ಎಂದು ತಿರುಗೇಟು ನೀಡಿದ್ದಾರೆ.