

ಗದಗ: ಕರ್ನಾಟಕದ ಗದಗ ಜಿಲ್ಲೆಯ ಹೊಂಬಳ ಗ್ರಾಮದ ವೀರ ಪುತ್ರಿ, ಭಾರತೀಯ ಸೇನೆಯ ಕರ್ನಲ್ ಸ್ಫೂರ್ತಿ ಕುಲಕರ್ಣಿ ಅವರು ಗಡಿ ರಸ್ತೆಗಳ ಸಂಸ್ಥೆಯ (BRO) ಇತಿಹಾಸದಲ್ಲೇ ಅತ್ಯುನ್ನತ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಬಿಆರ್ಒ ಅಡಿಯ 'ಪ್ರಾಜೆಕ್ಟ್ ಚೇತಕ್'ನ 45 ಟಾಸ್ಕ್ ಫೋರ್ಸ್ನ ಪ್ರಥಮ ಮಹಿಳಾ ಕಮಾಂಡರ್ ಆಗಿ ನೇಮಕಗೊಳ್ಳುವ ಮೂಲಕ ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
1989ರ ಮೇ 26ರಂದು ಜನಿಸಿದ ಸ್ಫೂರ್ತಿ ಕುಲಕರ್ಣಿ, ಗದಗ ಸಮೀಪದ ಹೊಂಬಳ ಗ್ರಾಮದ ರಂಗನಾಥ ಕುಲಕರ್ಣಿ ಮತ್ತು ಗೀತಾ ದಂಪತಿಯ ಹಿರಿಯ ಪುತ್ರಿ. ಅವರ ಕಿರಿಯ ಸಹೋದರಿ ಸಂಪ್ರಿತಾ ಕುಲಕರ್ಣಿ ಕೂಡ ಭಾರತೀಯ ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಣ್ಣ ಹಳ್ಳಿಯಿಂದ ಬಂದ ಸ್ಫೂರ್ತಿ, ಗ್ರಾಮೀಣ ಹಿನ್ನೆಲೆ ಅಥವಾ ಮಹಿಳೆ ಎಂಬ ಕಾರಣ ಯಾವುದೇ ವ್ಯಕ್ತಿಯ ಸಾಧನೆಗೆ ಅಡ್ಡಿಯಾಗಬಾರದು ಎಂಬುದನ್ನು ತಮ್ಮ ಯಶಸ್ಸಿನ ಮೂಲಕ ತೋರಿಸಿದ್ದಾರೆ.
ಸಮರ್ಪಣೆ, ಧೈರ್ಯ ಹಾಗೂ ದೃಢಸಂಕಲ್ಪದಿಂದ ಭಾರತೀಯ ಸೇನೆಯಲ್ಲಿ ವಿಶಿಷ್ಟ ಹಾದಿ ನಿರ್ಮಿಸಿರುವ ಅವರು, ವಿಶೇಷವಾಗಿ ಗ್ರಾಮೀಣ ಭಾಗದ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.
ಸ್ಫೂರ್ತಿ ಅವರು ಗದಗದ ತೋಂಟದಾರ್ಯ, ಸೇಂಟ್ ಜಾನ್ಸ್ ಹಾಗೂ ವಿದ್ಯಾದಾನ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. 2003ರಲ್ಲಿ ತಾಯಿ ನಿಧನರಾದ ಬಳಿಕ ತಂದೆ ರಂಗನಾಥ ಕುಲಕರ್ಣಿ ಏಕ ಪೋಷಕರಾಗಿ ಮಕ್ಕಳನ್ನು ಬೆಳೆಸಿದರು.
ಪುಣೆಯಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಸ್ಫೂರ್ತಿ, ಬಾಗಲಕೋಟೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಎಸ್ಎಸ್ಬಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2011ರಲ್ಲಿ ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಗೆ ಸೇರ್ಪಡೆಯಾದರು.
ಭಾರತದ ಪಶ್ಚಿಮ ಗಡಿಯಲ್ಲಿ ಕಾರ್ಯತಂತ್ರದ ರಸ್ತೆ ಸಂಪರ್ಕವನ್ನು ಅಭಿವೃದ್ಧಿಪಡಿಸುವುದು ಮತ್ತು ನಿರ್ವಹಿಸುವ ಮಹತ್ವದ ಜವಾಬ್ದಾರಿಯನ್ನು ಸ್ಫೂರ್ತಿ ಅವರು ನಿರ್ವಹಿಸುತ್ತಿದ್ದಾರೆ.
ಸ್ಫೂರ್ತಿ ಅವರ ತಂದೆ ರಾಮಚಂದ್ರ ಮಾತನಾಡಿ, “ಭಾರತದ ಪಶ್ಚಿಮ ಗಡಿಯಲ್ಲಿ ಕಾರ್ಯತಂತ್ರದ ರಸ್ತೆ ಸಂಪರ್ಕ ಅಭಿವೃದ್ಧಿ ಮತ್ತು ನಿರ್ವಹಣೆಯ ಮಹತ್ವದ ಜವಾಬ್ದಾರಿ ಅವರ ಮೇಲಿದೆ. ಬಿಆರ್ಒ ಟಾಸ್ಕ್ ಫೋರ್ಸ್ಗೆ ಕಮಾಂಡ್ ವಹಿಸಿದ ಮೊದಲ ಮಹಿಳಾ ಸೇನಾಧಿಕಾರಿಯಾಗಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಗಡಿ ರಸ್ತೆಗಳ ಸಂಸ್ಥೆಯಲ್ಲಿ (BRO) ಇತ್ತೀಚಿನ ದಿನಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಮುಂಚೂಣಿಯ ಕಾರ್ಯಾಚರಣೆಗಳ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಇದೇ ವರ್ಷದ ಆರಂಭದಲ್ಲಿ ಕರ್ನಲ್ ಶಿಖಾ ಭದೌರಿಯಾ ಅವರು ಉತ್ತರ ಕಾಶ್ಮೀರದ 'ಪ್ರಾಜೆಕ್ಟ್ ಬೀಕನ್' ಅಡಿಯಲ್ಲಿ 32 ಬಿಆರ್ಟಿಎಫ್ (BRTF) ಕಮಾಂಡ್ ವಹಿಸಿಕೊಂಡಿದ್ದರು. ಈಗ ಕರ್ನಲ್ ಸ್ಫೂರ್ತಿ ಕುಲಕರ್ಣಿ ಅವರು ಪಶ್ಚಿಮ ಗಡಿಯಲ್ಲಿ ಕಮಾಂಡರ್ ಆಗಿ ನೇಮಕಗೊಳ್ಳುವ ಮೂಲಕ ಈ ಸಾಲಿಗೆ ಸೇರಿದ್ದಾರೆ.