

ಶಿವಮೊಗ್ಗ: ವ್ಯಕ್ತಿಯೊಬ್ಬನಿಗೆ ನಡುರಸ್ತೆಯಲ್ಲಿ ಕಬ್ಬಿಣದ ರಾಡ್ ನಿಂದ ಬರ್ಬರವಾಗಿ ಥಳಿಸಿದ ಆರೋಪದ ರಾಘವೇಂದ್ರ ಆಲಿಯಾಸ್ ಆಪಲ್ ರಘು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸನಗರ ತಾಲೂಕಿನ ಗರತಿಕೆರೆ ಸಮೀಪದ ಅವುಕ ಸರ್ಕಲ್ ನಲ್ಲಿ ಶನಿವಾರ ತಡರಾತ್ರಿ ಈ ಅಮಾನವೀಯ ಘಟನೆ ನಡೆದಿತ್ತು. ಈ ಮಾರಣಾಂತಿಕ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಥಳೀಯ ನಿವಾಸ ಮಂಜುನಾಥ್ ಎಂಬಾತನ ಮೇಲೆ ಕಬ್ಬಿಣದ ರಾಡ್ನಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಲ್ಲದೆ ಗಾಯಗೊಂಡು ನೆಲಕ್ಕೆ ಬಿದ್ದಿದ್ದ ಮಂಜುನಾಥ್ನ ತಲೆಯ ಮೇಲೆ ಆರೋಪಿ ಮನುಷ್ಯತ್ವ ಮರೆತು ಕಾಲಿಟ್ಟು ಅಟ್ಟಹಾಸ ಮೆರೆದಿದ್ದಾನೆ.
ಈ ಘಟನೆಯ 1 ನಿಮಿಷ 26 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದಾರಿಹೋಕರು ಈ ವಿಡಿಯೋ ಮಾಡಿದ್ದು, ಮಂಜುನಾಥ್ ಮೇಲೆ ರಾಘವೇಂದ್ರ ಮನಬಂದಂತೆ ಹಲ್ಲೆ ನಡೆಸಿದ್ದು, ಬಳಿಕ ರಸ್ತೆಬದಿಗೆ ಎಳೆದುಕೊಂಡು ಹೋಗುವುದು ವಿಡಿಯೋದಲ್ಲಿದೆ.
ವಿಡಿಯೋ ಬಳಿಕ ರಘುವನ್ನು ಪೊಲೀಸರು ಬಂಧಿಸಿದ್ದು, ಕೇಸ್ ದಾಖಲಿಸಲಾಗಿದೆ. ಈ ಕೃತ್ಯದ ಹಿಂದಿನ ಕಾರಣವೇನು ಎಂಬುದನ್ನು ತಿಳಿಯಲು ಆರೋಪಿಯ ತನಿಖೆ ನಡೆಸಲಾಗುತ್ತಿದೆ ಎಂದು ಶಿವಮೊಗ್ಗ ಎಸ್ ಪಿ ಬಿ ನಿಖಿಲ್ ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.