

ಬೆಂಗಳೂರು: ಕರ್ತವ್ಯನಿರತ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ.
ತಾವು ಸಂಚರಿಸುತ್ತಿದ್ದ ಕಾರನ್ನು ತಡೆದ ಕಾರಣಕ್ಕಾಗಿ ಕೋಪಗೊಂಡ ಗೊಟ್ಟಿಗೆರೆ ಮಂಜುನಾಥ್ ಪೊಲೀಸ್ ಪೇದೆ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಖಾಸಗಿ ಹೋಟೆಲ್ನಲ್ಲಿ ಪೊಲೀಸರು ಇದೀಗ ವಶಕ್ಕೆ ಪಡೆದಿದ್ದಾರೆ.
ಆಗಿದ್ದೇನು?
ಬೆಂಗಳೂರಿನ ಗೊಟ್ಟಿಗೆರೆ ಜಂಕ್ಷನ್ನಲ್ಲಿ ಹುಳಿಮಾವು ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಅರುಣ್ ಕರ್ತವ್ಯದಲ್ಲಿದ್ದರು. ಈ ವೇಳೆ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಅರುಣ್ ಅವರು ಹ್ಯಾಂಡ್ ಸಿಗ್ನಲ್ (ಕೈ ಸನ್ನೆ) ಮೂಲಕ ವಾಹನಗಳನ್ನು ನಿಲ್ಲಿಸುತ್ತಿದ್ದರು.
ಅದೇ ಮಾರ್ಗವಾಗಿ ಬಂದ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜುನಾಥ್ ಅವರ ವಾಹನವನ್ನೂ ನಿಲ್ಲಿಸುವಂತೆ ಸಿಗ್ನಲ್ ನೀಡಿದ್ದಾರೆ.
ವಾಹನ ನಿಲ್ಲಿಸಿದ್ದಕ್ಕೆ ತೀವ್ರ ರೊಚ್ಚಿಗೆದ್ದ ಗೊಟ್ಟಿಗೆರೆ ಮಂಜುನಾಥ್ ಕಾರಿನಿಂದ ಕೆಳಗಿಳಿದು 'ನನ್ನ ಗಾಡಿಯನ್ನೇ ಸ್ಟಾಪ್ ಮಾಡ್ತೀಯಾ?' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲದೇ ಪೊಲೀಸ್ ಸಿಬ್ಬಂದಿ ಅರುಣ್ ಅವರ ಕೊರಳಪಟ್ಟಿ (ಕಾಲರ್) ಹಿಡಿದು ಹಲ್ಲೆ ನಡೆಸಿದ್ದಾರೆ.
ಟ್ರಾಫಿಕ್ ಸಿಬ್ಬಂದಿಗೆ ಕಾಲಿನಿಂದ ಒದೆಯಲು ಮುಂದಾಗಿದ್ದಾನೆ. ಈ ದೃಶ್ಯ ಕಂಡು ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿ, ಪೊಲೀಸರನ್ನು ರಕ್ಷಿಸಿದ್ದಾರೆ.
ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿ
ಘಟನೆಯ ನಂತರ ಹುಳಿಮಾವು ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ಆರೋಪದಡಿ ಪ್ರಕರಣ ದಾಖಲಾಗುತ್ತಿದ್ದಂತೆ ಗೊಟ್ಟಿಗೆರೆ ಮಂಜುನಾಥ್ ಪರಾರಿಯಾಗಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು, ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ನಿನ್ನೆ ರಾತ್ರಿ ಬಂಧಿಸಿದ್ದಾರೆ.