

ಬೆಂಗಳೂರು: ಸೋನಿಯಾ ಗಾಂಧಿ ಅವರ ಅಂಗಳದಲ್ಲಿ 'ಜೀ ಹುಜೂರ್' ಎಂದು ತಲೆಯಾಡಿಸುವ ಗುಲಾಮಿ ಮಾನಸಿಕತೆಯ ನಾಯಕರಿಗೆ, ಈ ಮಾತೃಭೂಮಿಯ ಕಲ್ಪನೆ ಮತ್ತು ಸ್ವಾತಂತ್ರ್ಯ ಹೋರಾಟದ ಪವಿತ್ರತೆ ಹೇಗೆ ತಾನೇ ಅರ್ಥವಾದೀತು? ಅಲ್ಲವೇ ಹರಿಪ್ರಸಾದ್ ಅವರೇ? ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ ಖಾತೆಯಲ್ಲಿ ಬರೆದುಕೊಂಡಿರುವ ಅಶೋಕ್, ಜೈಲಿಗೆ ಹಾಕಿದ್ರೂ, ನೇಣಿಗೆ ಹಾಕಿದ್ರೂ 'ವಂದೇ ಮಾತರಂ' ಪೂರ್ಣ ಹಾಡಲ್ಲ ಎನ್ನುತ್ತೀರಲ್ಲ, ನಿಮ್ಮ ಭಂಡತನಕ್ಕೆ ಏನು ಹೇಳೋಣ? 'ವಂದೇ ಮಾತರಂ' ಎನ್ನುವುದು ಬರೀ ಹಾಡಲ್ಲ. ಅದು ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿ, ಕೋಟ್ಯಂತರ ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಪವಿತ್ರ ಮಂತ್ರ. ಲಕ್ಷಾಂತರ ಕ್ರಾಂತಿಕಾರಿಗಳು ನೇಣಿನ ಕುಣಿಕೆಯನ್ನು ನಗುತ್ತಾ ಮುದ್ದಾಡಲು ಸ್ಪೂರ್ತಿಯಾದ ಭಾರತ ಮಾತೆಯ ಜಯಘೋಷ ಎಂದಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದ ಆತ್ಮವಾಗಿದ್ದ ಈ ಗೀತೆಯನ್ನು ಮತ್ತು ನಮ್ಮ ಅಮರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಇಷ್ಟೊಂದು ಹಗುರವಾಗಿ ನಿಂದಿಸುವುದು ಭಾರತ ಮಾತೆಗೆ ಎಸಗಿದ ಘೋರ ಅಪಚಾರ! ಎಂದು ಕಿಡಿಕಾರಿದ್ದಾರೆ.
ನಿಮಗೆ ದೇಶದ ಸ್ವಾತಂತ್ರ್ಯ ಚಳುವಳಿಯ ಇತಿಹಾಸಕ್ಕಿಂತ ಹೈಕಮಾಂಡ್ ತಾಳಕ್ಕೆ ಕುಣಿಯುವುದೇ ಹೆಚ್ಚಾಯಿತೇ? ಕಾಂಗ್ರೆಸ್ನ ನರನಾಡಿದಲ್ಲೂ ಹರಿಯುತ್ತಿರುವ ಈ ತುಷ್ಟೀಕರಣ ಮತ್ತು ಓಲೈಕೆ ಮನಸ್ಥಿತಿಯನ್ನು ಕನ್ನಡಿಗರು ಹಾಗೂ ಈ ದೇಶದ ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ.
ವಂದೇ ಮಾತರಂ ಕಾಂಗ್ರೆಸ್ಗಿಂತ ದೊಡ್ಡದು, ಭಾರತ ಮಾತೆ ಹೈಕಮಾಂಡ್ಗಿಂತ ದೊಡ್ಡದು, ಭಾರತ ದೇಶಕ್ಕಿಂತ ವೋಟ್ ಬ್ಯಾಂಕ್ ರಾಜಕೀಯಕೀಯ ದೊಡ್ಡದು ಎಂದು ಲೇವಡಿ ಮಾಡಿದ್ದಾರೆ.