

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಫೋನ್ಗಳು ಪತ್ತೆಯಾದ ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ, ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇರಿಸಲಾಗಿದ್ದ ಸೆಲ್ ಸೇರಿದಂತೆ ಜೈಲಿನೊಳಗೆ ಮೊಬೈಲ್ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮತ್ತಿಬ್ಬರು ಜೈಲಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಅಧಿಕಾರಿಗಳನ್ನು ಜೈಲರ್ ರಮೇಶ್ ಧರ್ಮಟ್ಟಿ ಹಾಗೂ ವಾರ್ಡರ್ ಮಹೇಶ್ ಸಜ್ಜನ್ ಎಂದು ಗುರುತಿಸಲಾಗಿದೆ. ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಆರೋಪದಡಿ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (DG Prisons) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಆಗಸ್ಟ್ 11ರಂದು ಕೇಂದ್ರ ಅಪರಾಧ ವಿಭಾಗ (CCB) ನಡೆಸಿದ ದಾಳಿಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈ ದಾಳಿ ನಡೆದಿತ್ತು.
ರೇವಣ್ಣ ಅವರನ್ನು ಇರಿಸಲಾಗಿದ್ದ ಕೊಠಡಿಯಲ್ಲಿ ಪತ್ತೆಯಾದ ತಿಳಿ ನೀಲಿ ಬಣ್ಣದ ರೆಡ್ಮಿ 5ಜಿ ಮೊಬೈಲ್ನಲ್ಲಿ ಮೆಸೆಂಜರ್ ಹಾಗೂ ಸ್ಟ್ರೀಮಿಂಗ್ ಆ್ಯಪ್ಗಳು ಇನ್ಸ್ಟಾಲ್ ಆಗಿದ್ದವು. ಅಲ್ಲದೆ, ಮೊಬೈಲ್ಗೆ ಪಾಸ್ವರ್ಡ್ ಹಾಕಲಾಗಿತ್ತು.
ಬಳಿಕ ಡಿಜಿ ಅಲೋಕ್ ಕುಮಾರ್ ಅವರ ನಿರ್ದೇಶನದಂತೆ ಜೈಲು ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಇನ್ನೂ ಕೆಲವು ಮೊಬೈಲ್ ಫೋನ್ಗಳು ಪತ್ತೆಯಾಗಿವೆ. ತಕ್ಷಣವೇ ಓರ್ವ ಸಹಾಯಕ ಅಧೀಕ್ಷಕರನ್ನು ಅಮಾನತುಗೊಳಿಸಲಾಗಿದ್ದು, ಜೈಲು ಅಧೀಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, ತನಿಖೆಗೆ ಆದೇಶಿಸಲಾಗಿದೆ.
ಕಾರಾಗೃಹಗಳ ಡಿಐಜಿ ಜಿನೇಂದ್ರ ಖನಗಾವಿ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಜೈಲಿನಲ್ಲಿ ವ್ಯಾಪಕವಾಗಿ ಮೊಬೈಲ್ ಫೋನ್ಗಳ ಬಳಕೆ, ಕೈದಿಗಳು ಸಮವಸ್ತ್ರ ಧರಿಸದಿರುವುದು ಹಾಗೂ ಇದರಲ್ಲಿ ಜೈಲು ಅಧಿಕಾರಿಗಳ ಪಾತ್ರ ಸೇರಿದಂತೆ ಹಲವು ಕರ್ತವ್ಯಲೋಪಗಳ ಕುರಿತು ಖನಗಾವಿ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಪರಪ್ಪನ ಅಗ್ರಹಾರ ಪೊಲೀಸರು ಕೂಡ ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.