

ಸಾಗರ (ಶಿವಮೊಗ್ಗ): ರಾಜ್ಯದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಪಾಗಲ್ ಪ್ರೇಮಿಯ ವಿಡಿಯೋ ಬ್ಲ್ಯಾಕ್ ಮೇಲ್ ಗೆ ಹೆದರಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಸಾಗರ ತಾಲೂಕಿನ ನಿವಾಸಿಯಾದ ಸುಮುಖ್ ಎಂಬ ಯುವಕ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಯ ಹೆಸರಿನಲ್ಲಿ ನಿರಂತರವಾಗಿ ಬೆನ್ನತ್ತಿದ್ದನು. ಆಕೆಯ ಮನಸ್ಸನ್ನು ಕೆಡಿಸುವ ಉದ್ದೇಶದಿಂದ ಯಾರಿಗೂ ತಿಳಿಯದಂತೆ ಒಂದು ಮೊಬೈಲ್ ಫೋನ್ ಕೂಡ ಕೊಡಿಸಿದ್ದನು. ಆದರೆ, ಈ ಪ್ರೀತಿ ಎಂಬ ಮುಖವಾಡದ ಹಿಂದೆ ಅಡಗಿದ್ದ ವಿಕೃತಿಯೊಂದು ಮುಗ್ಧ ಬಾಲಕಿಯ ಜೀವವನ್ನೇ ಬಲಿಪಡೆದಿದೆ. ಅದರಂತೆ, ಕಾಲೇಜು ಮೆಟ್ಟಿಲೇರಿ ಕನಸುಗಳನ್ನು ಕಟ್ಟಿಕೊಳ್ಳುತ್ತಿದ್ದ ಯುವತಿಯೊಬ್ಬಳು ಬ್ಲ್ಯಾಕ್ಮೇಲ್ ಹಾಗೂ ನಿರಂತರ ಕಿರುಕುಳಕ್ಕೆ ಬೇಸತ್ತು ದುರಂತ ಅಂತ್ಯ ಕಂಡಿರುವ ಕರುಣಾಜನಕ ಘಟನೆ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಶಿವಮೊಗ್ಗ ಜಿಲ್ಲೆಯ ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, 2nd ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಗೆ ಅದೇ ತಾಲೂಕಿನ ನಿವಾಸಿಯಾದ ಸುಮುಖ್ ಎಂಬ ಯುವಕನ ಪರಿಚಯವಿತ್ತು. ಈ ಪರಿಚಯವನ್ನು ಬಳಸಿಕೊಂಡ ಸುಮುಖ್, ಪ್ರೀತಿ ಮತ್ತು ಪ್ರೇಮದ ಹೆಸರಿನಲ್ಲಿ ಬಾಲಕಿಯ ಹಿಂದೆ ಬಿದ್ದಿದ್ದನು. ಆಕೆಯ ತಲೆಯನ್ನು ಕೆಡಿಸಿ ತನ್ನ ಕಡೆಗೆ ಸೆಳೆಯಲು ಯಾರಿಗೂ ತಿಳಿಯದಂತೆ ಒಂದು ಮೊಬೈಲ್ ಫೋನ್ ಅನ್ನು ಕೂಡ ನೀಡಿದ್ದನು. ಇದೇ ವೇಳೆ, ಬಾಲಕಿಯ ಕೈಯಲ್ಲಿ ಮೊಬೈಲ್ ಫೋನ್ ಇರುವುದನ್ನು ಗಮನಿಸಿದ ಕುಟುಂಬದವರು ತಕ್ಷಣವೇ ಜಾಗೃತರಾಗಿ, ಮಗಳಿಗೆ ತಿಳಿಹೇಳಿ ಆಕೆಯ ಬಳಿಯಿದ್ದ ಮೊಬೈಲ್ ಫೋನ್ ಅನ್ನು ಕಸಿದುಕೊಂಡಿದ್ದರು. ಜೊತೆಗೆ, ಅಪ್ರಾಪ್ತ ವಯಸ್ಸಿನಲ್ಲಿ ಇಂತಹ ಹಾದಿ ತಪ್ಪುವ ಕೆಲಸಗಳು ಬೇಡ ಎಂದು ಬುದ್ಧಿ ಹೇಳಿ, ಎಂದಿನಂತೆ ಕಾಲೇಜಿಗೆ ಕಳುಹಿಸುತ್ತಿದ್ದರು. ಅದರಂತೆ, ಪೋಷಕರು ಬುದ್ಧಿ ಹೇಳಿದ ನಂತರ ಬಾಲಕಿಯು ಸುಮುಖ್ನಿಂದ ದೂರವಿರಲು ನಿರ್ಧರಿಸಿದ್ದಾಳೆ.
ಆದರೆ, ತನ್ನಿಂದ ದೂರವಾಗುತ್ತಿದ್ದನ್ನು ಕಂಡು ಕೆರಳಿದ ಆರೋಪಿ ಸುಮುಖ್, ಆಕೆಗೆ ದಾರಿಯುದ್ದಕ್ಕೂ ಅಡ್ಡಗಟ್ಟಿ ನಿರಂತರವಾಗಿ ಪೀಡಿಸಲು ಶುರುಮಾಡಿದ್ದಾನೆ. ತನ್ನ ಬಳಿ ಆಕೆಯ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಇವೆ ಎಂದು ಹೇಳಿ ಡಿಜಿಟಲ್ ರೂಪದಲ್ಲಿ ಟಾರ್ಚರ್ ಕೊಡಲು ಆರಂಭಿಸಿದ್ದಾನೆ. ಜೊತೆಗೆ, ಕಾಲೇಜಿಗೆ ಹೋಗುವ ಮತ್ತು ಬರುವ ದಾರಿಯಲ್ಲಿ ಆಕೆಯನ್ನು ತಡೆದು ನಿಲ್ಲಿಸಿ ಮಾನಸಿಕವಾಗಿ ತೀವ್ರ ಕಿರುಕುಳ ನೀಡಿದ್ದಾನೆ. ಇನ್ನು, ಯುವಕನ ನಿರಂತರ ಕಿರುಕುಳ, ಬೆದರಿಕೆ ಹಾಗೂ ಬ್ಲ್ಯಾಕ್ಮೇಲ್ ತಂತ್ರಗಳಿಂದ ತೀವ್ರವಾಗಿ ನೊಂದ ಬಾಲಕಿ, ಮಾನಸಿಕ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೆ, ತನ್ನ ಮನೆಯಲ್ಲಿದ್ದ ಕಳೆನಾಶಕವನ್ನು ಸೇವಿಸಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇನ್ನು, ಆರೋಪಿ ಎಂದು ಹೆಸರಿಸಲಾದ 19 ವರ್ಷದ ಸುಮುಖ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.