

ಸೆಲೆಬ್ರಿಟಿಗಳು, ಶ್ರೀಮಂತ ರಾಜಕಾರಣಿಗಳು ತಮ್ಮ ಲೈಫ್ ಸ್ಟೈಲ್ ಗೆ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ದೇಶದ ಅತಿ ಶ್ರೀಮಂತ ಮುಖ್ಯಮಂತ್ರಿ ಎನಿಸಿಕೊಂಡಿರುವ ಡಿ ಕೆ ಶಿವಕುಮಾರ್ ಅವರು ತಾವು ಹೇರ್ ಕಟ್ ಗೆ ಕೇವಲ 50 ರೂಪಾಯಿ ಖರ್ಚು ಮಾಡಿದ್ದೆ ಎಂದು ಹೇಳಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗುತ್ತಿದೆ.
ನಾನು ಆಗರ್ಭ ಶ್ರೀಮಂತನಾದರೂ ಸರಳ ಜೀವನಶೈಲಿಯನ್ನೇ ಪಾಲಿಸುತ್ತೇನೆ, ನಾನು ನನ್ನ ಹೇರ್ಕಟ್ಗಾಗಿ 50 ರೂ. ಖರ್ಚು ಮಾಡಿದ್ದು ದೆಹಲಿಗೆ ಇತ್ತೀಚೆಗೆ ಹೋಗಿದ್ದಾಗ. ನಾನು ಸರಳ ಜೀವನವನ್ನು ಇಷ್ಟಪಡುತ್ತೇನೆ. ದುಂದುವೆಚ್ಛ ನನಗೆ ಹಿಡಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿಕೊಂಡಿದ್ದಾರೆ. ಇಂಗ್ಲಿಷ್ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಸಂದರ್ಶನದಲ್ಲಿ ಖ್ಯಾತ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರ ಪ್ರಶ್ನೆಗೆ ಉತ್ತರಿಸಿದರು.
ನಾನು ಜೀವನ ಮಾಡುವುದಕ್ಕೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ಖರ್ಚು ಮಾಡುತ್ತೇನೆ. ದಿಲ್ಲಿಯಲ್ಲಿ ನಾನು 50 ರೂ. ಕೊಟ್ಟು ಹೇರ್ಕಟ್ ಮಾಡಿಸಿಕೊಳ್ಳುತ್ತೇನೆ. ಸರಳ ಜೀವನ ನನ್ನ ಆಯ್ಕೆ ಎಂದು ಸಂದರ್ಶನದಲ್ಲಿ ಡಿಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ.
ಆದರೆ, 50 ರೂಪಾಯಿಗೆ ಹೇರ್ ಕಟ್ ಮಾಡೋ ಬಾರ್ಬರ್ ಯಾರಿದ್ದಾರೆ ಈಗ, ಬಹುಶಃ ಮುಖ್ಯಮಂತ್ರಿಗಳು ಟಿಪ್ಸ್ ಕೊಡೋದನ್ನು ಹೇಳುತ್ತಿರಬೇಕೆಂದು ವಿರೋಧ ಪಕ್ಷದವರು, ಸಾಮಾನ್ಯ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೇರ್ ಕಟ್ಟಿಂಗ್ ಗೆ 50 ರೂಪಾಯಿ ಎಂದು ಹೇಳುವ ಡಿಕೆಶಿಯವರೇ ರೊಲೆಕ್ಸ್ ವಾಚ್ ಕಟ್ಟುತ್ತೀರಾ, ಏನು ಜನರು ನಿಮ್ಮ ಮಾತುಗಳನ್ನು ನಂಬುವ ಮುಟ್ಟಾಳರು ಎಂದು ಭಾವಿಸಿದ್ದೀರಾ ಎಂದು ಜೆಡಿಎಸ್ ಕೇಳಿದೆ.
ಸಿಂಪಲ್ ಲಿವಿಂಗ್ ಮತ್ತು ಡಿ ಕೆ ಶಿವಕುಮಾರ್ ಅವರಿಗೆ ಸಂಬಂಧವಿದೆಯೇ ಎಂದು ಮಾಜಿ ಸಚಿವ ಬಿಜೆಪಿ ಶಾಸಕ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಅಮಿತ್ ಶಾ ಆಗಲ್ಲ ಎಂದ ಡಿಕೆಶಿ
ಇನ್ನು ಇದೇ ಸಂದರ್ಶನದಲ್ಲಿ ತಮ್ಮನ್ನು "ಕಾಂಗ್ರೆಸ್ನ ಅಮಿತ್ ಶಾ" ಎಂದು ಕರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, "ನಾನು ಅಮಿತ್ ಶಾ ಆಗಲು ಇಷ್ಟಪಡುವುದಿಲ್ಲ. ನಾನು ಕಾಂಗ್ರೆಸ್ನ ಸಾಮಾನ್ಯ ಕಾರ್ಯಕರ್ತ, ಪಕ್ಷ ನನಗೆ ಏನು ಜವಾಬ್ದಾರಿ ನೀಡುವುದೋ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಷ್ಟೇ ನನ್ನ ಕರ್ತವ್ಯ. ನನಗೆ ಅಮಿತ್ ಶಾ ಆಗುವುದು ಬೇಕಿಲ್ಲ" ಎಂದು ಮಾರ್ಮಿಕವಾಗಿ ಹೇಳಿದರು.
2028ಕ್ಕೆ ಮತ್ತೆ ಕಾಂಗ್ರೆಸ್
ಇನ್ನು 2028ರಲ್ಲಿ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುತಮದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲಿದೆ" ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇದೇ ವೇಳೆ ಭವಿಷ್ಯ ನುಡಿದರು. 2029ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗುವ ಭರವಸೆಯನ್ನೂ ಅವರು ಇದೇ ವೇಳೆ ವ್ಯಕ್ತಪಡಿಸಿದರು.