

ಬೆಂಗಳೂರು: ಹಾವಿನ ಕಡಿತದಿಂದ ನಾಲ್ಕೂವರೆ ವರ್ಷದ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಚನ್ನಪಟ್ಟಣ ಟೌನ್ ಪೊಲೀಸರು ಸರ್ಕಾರಿ ವೈದ್ಯರೊಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಬಾಲಕನನ್ನು ಗೋಲ್ಡನ್ ಅವರ್ನಲ್ಲೇ ಆಸ್ಪತ್ರೆಗೆ ಕರೆತಂದಿದ್ದರೂ ವೈದ್ಯರು ಸರಿಯಾದ ಚುಚ್ಚುಮದ್ದು ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಬಾಲಕನ ತಂದೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 60 ದಿನಗಳೊಳಗೆ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಏಪ್ರಿಲ್ನಲ್ಲಿ ಬಾಲಕ ಮೃತಪಟ್ಟಿದ್ದ. ಘಟನೆಯ ಬಳಿಕ ವೈದ್ಯರನ್ನು ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.
ಕುಶಾಲ್ ಅವರ ಪ್ರಕಾರ, ಸಂಜೆ ಸುಮಾರು 5.50ಕ್ಕೆ ಸಾತ್ವಿಕ್ನ ಬಲಗಾಲಿನ ಕಿರುಬೆರಳಿಗೆ ನಾಗರ ಹಾವು ಎರಡು ಬಾರಿ ಕಡಿದಿತ್ತು.
ಸಂಜೆ 6 ಗಂಟೆಯೊಳಗೆ, ಅಂದರೆ ಗೋಲ್ಡನ್ ಅವರ್ನಲ್ಲೇ, ನಾನು ಸಾತ್ವಿಕ್ನನ್ನು ಬೈಕ್ನಲ್ಲಿ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಡಾ. ರಂಜಿತ್ ಅವರು ಆ್ಯಂಟಿ ಸ್ನೇಕ್ ವೆನಮ್ (ASV) ಚುಚ್ಚುಮದ್ದು ನೀಡುವ ಬದಲು ಟಿಟಿ ಹಾಗೂ ಮತ್ತೊಂದು ಚುಚ್ಚುಮದ್ದು ನೀಡಿದರು. ಬಳಿಕ ಸಾತ್ವಿಕ್ನನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ವ್ಯವಸ್ಥೆಯನ್ನೂ ಮಾಡಿಕೊಡಲಿಲ್ಲ ಎಂದು ಕುಶಾಲ್ ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಸೋದರಳಿಯನನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಖಾಸಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಷ್ಟರಲ್ಲಿ ವಿಷ ದೇಹದಾದ್ಯಂತ ಹರಡಿತ್ತು. ಬಳಿಕ ಆರ್.ಆರ್. ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಸರ್ಕಾರಿ ಆಸ್ಪತ್ರೆಯ ಚಿಕಿತ್ಸಾ ದಾಖಲೆಯನ್ನು ಪರಿಶೀಲಿಸಿದ ಅಲ್ಲಿನ ವೈದ್ಯರು, ಆ್ಯಂಟಿ ಸ್ನೇಕ್ ವೆನಮ್ ಚುಚ್ಚುಮದ್ದು ನೀಡುವ ಬದಲು ಬೇರೆ ಎರಡು ಚುಚ್ಚುಮದ್ದುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಡಾ. ರಂಜಿತ್ ASV ಚುಚ್ಚುಮದ್ದು ನೀಡಿದ್ದರೆ ನನ್ನ ಸೋದರಳಿಯ ಬದುಕುಳಿಯುತ್ತಿದ್ದ. ವೈದ್ಯರ ನಿರ್ಲಕ್ಷ್ಯ ಸ್ಪಷ್ಟವಾಗಿದ್ದರೂ ಅವರ ವಿರುದ್ಧ ಎಫ್ಐಆರ್ ದಾಖಲಿಸಿರಲಿಲ್ಲ. ಹೀಗಾಗಿ ಸಾತ್ವಿಕ್ನ ತಂದೆ ಹೈಕೋರ್ಟ್ ಮೊರೆ ಹೋದರು ಎಂದು ಕುಶಾಲ್ ಹೇಳಿದ್ದಾರೆ.
ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ರಂಜಿತ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಏಪ್ರಿಲ್ 28ರಂದು ನಾಗರ ಹಾವು ಕಡಿತಕ್ಕೊಳಗಾಗಿದ್ದ ಎನ್. ಸಾತ್ವಿಕ್ ಎಂಬ ಬಾಲಕ ಎರಡು ದಿನಗಳ ಬಳಿಕ ಆರ್.ಆರ್. ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಏಪ್ರಿಲ್ 30ರಂದು ಚನ್ನಪಟ್ಟಣ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದರು.
ಜಾಲಹಳ್ಳಿಯಲ್ಲಿ ವಾಸವಾಗಿರುವ ಬಿಇಎಲ್ ಉದ್ಯೋಗಿ ಹಾಗೂ ಸಾತ್ವಿಕ್ ತಂದೆ ಎನ್. ನಿರಂಜನ್ (36) ಅವರು ಜೂನ್ನಲ್ಲಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹಾವಿನ ವಿಷ ನಿರೋಧಕ ಔಷಧಿ (ಆ್ಯಂಟಿ ಸ್ನೇಕ್ ವೆನಮ್) ಲಭ್ಯವಿದ್ದರೂ ವೈದ್ಯರು ಅದನ್ನು ನೀಡದೆ ನಿರ್ಲಕ್ಷ್ಯ ತೋರಿದ್ದರಿಂದಲೇ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಅವರು ಆರೋಪಿಸಿದ್ದರು.
ಸಾತ್ವಿಕ್ ಚಿಕ್ಕಪ್ಪ ಸಿ. ಕುಶಾಲ್ ನೀಡಿದ ದೂರಿನ ಆಧಾರದ ಮೇಲೆ ಸೋಮವಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.