

ಬೆಂಗಳೂರು: ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಆಯೋಜನೆಗೊಂಡಿದ್ದ ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಶೋ ರದ್ದು ಮಾಡುವಂತೆ ಹಿಂದೂ ಕಾರ್ಯಕರ್ತ ಮೋಹನ್ ಗೌಡ ಎಂಬುವರು ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು. ನಂತರ ಕುನಾಲ್ ಕಾಮ್ರಾ ಶೋ ರದ್ದು ಮಾಡಲಾಗಿತ್ತು. ಈ ವಿಚಾರವನ್ನು ಮೋಹನ್ ಗೌಡ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದರು. ಈ ಟ್ವೀಟ್ ಆಧರಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ ಆರೋಪದಲ್ಲಿ ಎಫ್ಐಆರ್ ದಾಖಲಿಸಿದ್ದ ಪೊಲೀಸರು ಮೋಹನ್ ಗೌಡರನ್ನು ಬಂಧಿಸಿ ನಂತರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ವೈಟ್ಫೀಲ್ಡ್ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈಟ್ಫೀಲ್ಡ್ ಪೊಲೀಸರು ತಡರಾತ್ರಿ 2 ಗಂಟೆಗೆ ಎಫ್ಐಆರ್ ದಾಖಲಿಸಿ, ಅದೇ ದಿನ ಬೆಳಗ್ಗೆ ಉಡುಪಿಯಲ್ಲಿ ಮೋಹನ್ ಗೌಡರನ್ನು ವಶಕ್ಕೆ ಪಡೆದಿದ್ದು ನಂತರ ಬೆಂಗಳೂರಿಗೆ ಕರೆತಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಈ ಪ್ರಕರಣ ರದ್ದು ಕೋರಿ ಮೋಹನ್ ಗೌಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರಾದ ನಾಗಪ್ರಸನ್ನ ಅವರಿದ್ದ ಪೀಠ, ವೈಟ್ಫೀಲ್ಡ್ ಪೊಲೀಸರು ಪದೇಪದೇ ಕಾನೂನು ಉಲ್ಲಂಘಿಸುತ್ತಿದ್ದಾರೆ. ವೈಟ್ಫೀಲ್ಡ್ ಠಾಣೆ ಬದಲು 'ಡಾರ್ಕ್' ಫೀಲ್ಡ್ ಠಾಣೆ ಎಂದು ಬದಲಾಯಿಸಬೇಕು ಎಂದು ನ್ಯಾಯಧೀಶರು ಕಿಡಿಕಾರಿದರು. ವಿಚಾರಣೆ ವೇಳೆ ಡಿಸಿಪಿ ಖುದ್ದು ಹಾಜರಾಗಿದ್ದರು. ಖಾಕಿ ಸಮವಸ್ತ್ರ ಧರಿಸಿದ ತಕ್ಷಣವೇ ಸಂವಿಧಾನಕ್ಕಿಂತ ಮೀರಿದ ಅಧಿಕಾರ ಅಥವಾ ರಕ್ಷಣೆ ಸಿಗುವುದಿಲ್ಲ. ನಾವು ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತ ವ್ಯವಸ್ಥೆಯಲ್ಲಿದ್ದೇವೆ. ಇದು ಯಾವುದೋ ವ್ಯಕ್ತಿಗಳ ಆಡಳಿತವಲ್ಲ, ಬಂಧಿಸುವ ಅಧಿಕಾರವು ದಬ್ಬಾಳಿಕೆಯ ಅಸ್ತ್ರವಾಗಬಾರದು ಎಂದು ಪೀಠ ಹೇಳಿದೆ.
ಅರ್ಜಿದಾರ ಮೋಹನ್ ಗೌಡ ಅವರು, ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಗದಿಯಾಗಿದ್ದ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಕೋರಿ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಠಾಣಾಧಿಕಾರಿಗಳು, ಮನವಿ ಸಂಬಂಧ ಕ್ರಮ ಕೈಗೊಳ್ಳಲಾಗುವುದು, ಕಾರ್ಯಕ್ರಮ ರದ್ದುಪಡಿಸಲಾಗುವುದು ಎಂಬ ಭರವಸೆ ನೀಡಿದ್ದರು.
ಇದೇ ವಿಚಾರಕ್ಕೆ ಸಂಬಂಧ ಅರ್ಜಿದಾರ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಕಾರ್ಯಕ್ರಮ ರದ್ದು ಮಾಡುವ ಸಂಬಂಧ ಅಧಿಕಾರಿಗಳು ಭರವಸೆ ನೀಡಿದ್ದು, ಇದು ನಮಗೆ ಜಯ ಸಿಕ್ಕಂತಾಗಿದೆ ಎಂಬುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಮಾತನಾಡಿದ್ದರು. ಇದರಿಂದ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೇ, ಉಡುಪಿಯಲ್ಲಿದ್ದ ಅರ್ಜಿದಾರರನ್ನು ಕರೆದುಕೊಂಡು ಠಾಣೆಗೆ ಬಂದು ವಿಚಾರಣೆಗೆ ಒಳಪಡಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು.