

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿರುವ ಬೆನ್ನಲ್ಲೇ ಮೈಸೂರು ಅರಮನೆಯಲ್ಲಿ ಶುಕ್ರವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತು.
ದಸರಾ ಗಜಪಡೆಯ ಮೊದಲ ತಂಡದ ಒಂಬತ್ತು ಆನೆಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸುವ ಕಾರ್ಯಕ್ರಮದ ವೇಳೆ ಜಂಬೋ ಶ್ರೀರಾಮ ಏಕಾಏಕಿ ಸಿಟ್ಟಿಗೆದ್ದು ಆಕ್ರೋಶ ವ್ಯಕ್ತಪಡಿಸಿದನು.
ಸ್ವಾಗತ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಶ್ರೀರಾಮ ಅಸಮಾಧಾನಗೊಂಡು ನಿಯಂತ್ರಣ ಕಳೆದುಕೊಳ್ಳುವಂತೆ ವರ್ತಿಸಿದ್ದಾನೆ. ಇದರಿಂದ ಸ್ಥಳದಲ್ಲಿದ್ದವರಲ್ಲಿ ಕೆಲಕಾಲ ಆತಂಕ ಉಂಟಾಯಿತು.
ಆದರೆ, ಪರಿಸ್ಥಿತಿಯನ್ನು ಗಮನಿಸಿದ ಮಾವುತ ಮತ್ತು ಕಾವಾಡಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಶ್ರೀರಾಮನನ್ನು ನಿಯಂತ್ರಣಕ್ಕೆ ತಂದರು. ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸರು ಕೂಡ ಕೂಡಲೇ ಮಧ್ಯಪ್ರವೇಶಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಂಡರು.
ಮೊದಲ ಹಂತದಲ್ಲಿ ಒಂಬತ್ತು ದಸರಾ ಆನೆಗಳು ಮೈಸೂರು ಅರಮನೆಗೆ ಆಗಮಿಸಿದ್ದು, ಅವುಗಳನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳುವ ವೇಳೆ ಈ ಘಟನೆ ನಡೆದಿದೆ. ಶ್ರೀರಾಮನನ್ನು ಶೀಘ್ರವಾಗಿ ನಿಯಂತ್ರಣಕ್ಕೆ ತಂದಿದ್ದರಿಂದ ಪರಿಸ್ಥಿತಿ ಮತ್ತೆ ಸಹಜ ಸ್ಥಿತಿಗೆ ಮರಳಿತು. ಘಟನೆ ವೇಳೆ ಯಾರಿಗೂ ಯಾವುದೇ ಅಪಾಯ ಸಂಭವಿಸಿರುವ ಬಗ್ಗೆ ಮಾಹಿತಿ ಇಲ್ಲ.
ದಸರಾ ಆನೆಗಳ ಅರಮನೆ ಪ್ರವೇಶದ ಸಂದರ್ಭದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ಆನೆಗಳ ವರ್ತನೆ ಹಾಗೂ ಅವುಗಳ ಆರೋಗ್ಯದ ಮೇಲೂ ಸಿಬ್ಬಂದಿ ನಿಗಾ ಇಡುತ್ತಿದ್ದಾರೆ.