

ಕೊಪ್ಪಳ : ಇಸ್ಲಾಂ ಧರ್ಮದ ಕುರಿತು ತಾವು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸಚಿವ ಬಸವರಾಜ ರಾಯರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಯಲಬುರ್ಗಾ ಪಟ್ಟಣದಲ್ಲಿ ಮಾತನಾಡಿದ ಅವರು, ತಾವು ಯಾವುದೇ ಧರ್ಮವನ್ನು ಕಡಿಮೆ ಎಂದು ಹೇಳಿಲ್ಲ. ಎಲ್ಲ ಧರ್ಮಗಳಲ್ಲಿರುವ ಉತ್ತಮ ವಿಚಾರಗಳನ್ನು ಗೌರವಿಸುವುದಾಗಿ ಹೇಳಿದ್ದಾರೆ.
ಮಾತನಾಡುವ ವೇಳೆ ಇಸ್ಲಾಂ ಧರ್ಮದಲ್ಲಿರುವ ಕೆಲವು ಉತ್ತಮ ವಿಚಾರಗಳ ಬಗ್ಗೆ ಹೇಳಿದ್ದಾಗಿ ರಾಯರೆಡ್ಡಿ ತಿಳಿಸಿದ್ದಾರೆ. ಎಲ್ಲ ಧರ್ಮಗಳೂ ಶ್ರೇಷ್ಠ ಎಂದು ನಾನು ಹೇಳಿದ್ದೇನೆ. ಇಸ್ಲಾಂ ಧರ್ಮದಲ್ಲೂ ಶ್ರೇಷ್ಠ ವಿಚಾರಗಳಿವೆ ಎಂದು ಹೇಳಿದ್ದೇನೆ. ಬೇರೆ ಧರ್ಮಗಳು ಕಡಿಮೆ ಎಂದು ಹೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿ ಅಲ್ಲ ಎಂದಿರುವ ರಾಯರೆಡ್ಡಿ, ಇಸ್ಲಾಂ, ಕ್ರೈಸ್ತ ಮತ್ತು ಯಹೂದಿ ಧರ್ಮಗಳ ಕುರಿತು ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ. ವಿವಿಧ ಧರ್ಮಗಳ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿರುವುದಾಗಿಯೂ ತಿಳಿಸಿದ್ದು, ಹಜ್ ಯಾತ್ರೆಗೆ ತೆರಳುವ ಆಸೆ ವ್ಯಕ್ತಪಡಿಸಿದ್ದರೂ ಸದ್ಯ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ವಿವಾದದ ನಡುವೆ ಬಸವಣ್ಣನ ವಚನವನ್ನು ಉಲ್ಲೇಖಿಸಿದ ರಾಯರೆಡ್ಡಿ, “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ಎಂಬ ಶರಣ ತತ್ವವನ್ನು ಪ್ರಸ್ತಾಪಿಸಿದರು. ಮನುಷ್ಯತ್ವ ಮತ್ತು ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದರು. ತಾವು ಮಠ-ಮಾನ್ಯಗಳಿಗೆ ನಿಯಮಿತವಾಗಿ ಹೋಗುವುದಿಲ್ಲ. ಆದರೆ ತಮ್ಮೊಂದಿಗೆ ಇರುವವರು ಅಥವಾ ಕುಟುಂಬದವರು ಆಹ್ವಾನಿಸಿದಾಗ ಅವರ ಒತ್ತಾಯದ ಮೇರೆಗೆ ಹೋಗುವುದಾಗಿ ಹೇಳಿದ್ದಾರೆ.
ಇದೇ ವೇಳೆ ಹಿಂದೂ ಧರ್ಮದ ಕುರಿತು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ರಾಯರೆಡ್ಡಿ, ಧರ್ಮಗಳ ಇತಿಹಾಸ ಮತ್ತು ಅವುಗಳ ವಿಚಾರಧಾರೆಗಳ ಬಗ್ಗೆ ತಾವು ಅಧ್ಯಯನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ
ಕುಕನೂರಿನಲ್ಲಿ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವ ಬಸವರಾಜ ರಾಯರೆಡ್ಡಿ, ಇಸ್ಲಾಂ ಧರ್ಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇಸ್ಲಾಂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಶ್ರೇಷ್ಠ ಧರ್ಮವಾಗಿದ್ದು, ಕುರಾನ್ ಅಧ್ಯಯನಕ್ಕೂ ತಾವು ಸಿದ್ಧ ಎಂದು ಹೇಳಿದ್ದರು. ಹಜ್ ಯಾತ್ರೆಗೆ ತೆರಳುವ ಆಸೆಯನ್ನೂ ವ್ಯಕ್ತಪಡಿಸಿದ್ದರು.