

ಉಡುಪಿ: ಟ್ಯಾಟೂ ಹಾಕಿಸಿಕೊಳ್ಳುವ ವಿಚಾರದಲ್ಲಿ ಗಲಾಟೆ ಉಂಟಾಗಿದ್ದು, ಟ್ಯಾಟೂ ಕಲಾವಿದರೊಬ್ಬರ ಮೇಲೆ ಹಲ್ಲೆ ನಡೆಸಿ ಏರ್ ಗನ್ ನಿಂದ ಶೂಟ್ ಮಾಡಿರುವ ಘಟನೆ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಮಣಿಪುರ ನಿವಾಸಿ ವಿವೇಕ್ ಯು (30) ದೂರು ನೀಡಿದ್ದಾರೆ.
ಜನವರಿ 29 ರಂದು ರಾತ್ರಿ 10 ಗಂಟೆಯ ಸುಮಾರಿಗೆ ವಿವೇಕ್ ತನ್ನ ಮನೆಯಲ್ಲಿ ಸಾಗರ್ ಎಂಬುವವರಿಗೆ ಭಾಗಶ: ಟ್ಯಾಟೊವನ್ನು ಪೂರ್ಣಗೊಳಿಸಿದ್ದಾರೆ. ಇನ್ನೂ ಉಳಿದಿದ್ದ ಹಚ್ಚೆ ಕೆಲಸ ಪೂರ್ಣಗೊಳಿಸಲು ಮರುದಿನ ಆರೋಪಿ ಸಾಗರ್ನೊಂದಿಗೆ ಸೇನಾಪುರ ಗ್ರಾಮದಲ್ಲಿರುವ ಆತನ ಬಾಡಿಗೆ ಮನೆಗೆ ಹೋಗಿದ್ದಾರೆ.
ಅಲ್ಲಿ ಜನವರಿ 31 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ವಿವೇಕ್ ಮಲಗಿದ್ದಾಗ ಅವರ ಮುಖಕ್ಕೆ ಸಾಗರ್ ನೀರು ಎರಚಿ ಜಗಳ ತೆಗೆದಿದ್ದು, ಟ್ಯಾಟೂ ಸರಿಯಾಗಿ ಹಾಕಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಸಾಗರ್ ಸಹಚರರಾದ ಸುಮಂತ್ ಮತ್ತು ಆದಿತ್ಯ ನನ್ನನ್ನು ಹಗ್ಗದಿಂದ ಕಟ್ಟಿ, ಕಿರುಕುಳ ನೀಡಿ, ಕೈಕಾಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವಿವೇಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಧ್ಯಾಹ್ನ 3.15ರ ಸುಮಾರಿಗೆ ವಿವೇಕ್ ನೋವಿನಿಂದ ಕೂಗಿಕೊಂಡಾಗ ಸಾಗರ್ ತನ್ನ ಮನೆಯಿಂದ ಏರ್ ಗನ್ ತಂದು ಬೆದರಿಸಿದ್ದು, ಎದೆಗೆ ಏರ್ ಗನ್ ನಿಂದ ಗುಂಡು ಹಾರಿಸಿದ್ದಾನೆ.ಗಾಯಗೊಂಡ ವಿವೇಕ್ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ನ ಕಲಂ 352, 127(2), 115(2), 109 ರೀಡ್ ವಿಥ್ 3(5) ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3 ಮತ್ತು 25 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಪ್ರಕರಣ ದಾಖಲಾಗಿದೆ.
Advertisement