

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ರಾಜ್ಯದಲ್ಲಿನಡೆಯುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಬಳಸಿಯೇ ಮಾಡುವುದಾಗಿ ರಾಜ್ಯ ಸರ್ಕಾರ ಶುಕ್ರವಾರ ಹೇಳಿದೆ.
ಗದಗದ ಲಕ್ಕುಂಡಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ ಪಾಟೀಲ್ ಅವರು, ಕರ್ನಾಟಕದಲ್ಲಿ ನಡೆಯಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸೇರಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳುಇನ್ನು ಮುಂದೆ ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್ಗಳ (EVM) ಬದಲು ಬ್ಯಾಲೆಟ್ ಪೇಪರ್ ಮೂಲಕವೇ ನಡೆಸಲಾಗುತ್ತದೆ ಎಂದು ಹೇಳಿದರು.
ಜನರು ಇವಿಎಂಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಅದಕ್ಕಾಗಿಯೇ ಸರ್ಕಾರ ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಈ ನಿರ್ಧಾರವನ್ನು ಭಾರತ ಚುನಾವಣಾ ಆಯೋಗಕ್ಕೆ (EC) ಈಗಾಗಲೇ ತಿಳಿಸಲಾಗಿದೆ. ಅಗತ್ಯವಿದ್ದರೆ ಕಾನೂನು ತಿದ್ದುಪಡಿ ಮಾಡಲೂ ಸರ್ಕಾರ ಸಿದ್ಧವಿದೆ. ಬ್ಯಾಲೆಟ್ ಪೇಪರ್ ಮುದ್ರಣ ಹಾಗೂ ಚುನಾವಣಾ ವೆಚ್ಚಕ್ಕೆ ಬೇಕಾದ ಸಂಪೂರ್ಣ ಹಣವನ್ನು ರಾಜ್ಯ ಸರ್ಕಾರವೇ ಒದಗಿಸುತ್ತದೆ ಎಂದರು.
ಇದೇ ವೇಳೆ ವಿಧಾನಸಭೆ ಹಾಗೂ ವಿಧಾನಪರಿಷತ್ ಚುನಾವಣೆಗಳ ಬಗ್ಗೆ ನಾವು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದೂ ಸ್ಪಷ್ಟಪಡಿಸಿದರು.
ಬ್ಯಾಲೆಟ್ ಪೇಪರ್ ಬಳಕೆ ಹಿಂದಿನ ಹೆಜ್ಜೆಯಲ್ಲವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಇದು ಹಿಂದಕ್ಕೆ ಹೋಗುವ ಕ್ರಮವೇ ಅಲ್ಲ. ಜಗತ್ತಿನ ಹಲವು ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಇವಿಎಂ ಬಳಕೆಯನ್ನು ತ್ಯಜಿಸಿ ಮತ್ತೆ ಬ್ಯಾಲೆಟ್ ಪೇಪರ್ಗೆ ಮರಳಿವೆ ಎಂದು ಹೇಳಿದರು.
ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂಬ ಆತಂಕವೇ ಪ್ರಮುಖ ಕಾರಣವಾಗಿದೆ, ಇವಿಎಂ ಸುರಕ್ಷತೆ ಬಗ್ಗೆ ಸ್ಪಷ್ಟತೆ ಬರಲೆಂದು ನಾವು ಚುನಾವಣಾ ಆಯೋಗಕ್ಕೆ ಹ್ಯಾಕಥಾನ್ ನಡೆಸುವಂತೆ ಸಲಹೆ ನೀಡಿದ್ದೆವು. ಆದರೆ ಆಯೋಗ ಅದಕ್ಕೆ ಸಿದ್ಧವಾಗಲಿಲ್ಲ. ಚರ್ಚೆಗೂ ಮುಂದೆ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು,“ತಂತ್ರಜ್ಞಾನದಲ್ಲಿ ಬಹಳ ಮುನ್ನಡೆ ಸಾಧಿಸಿದ ರಾಷ್ಟ್ರಗಳೇ ಇವಿಎಂ ಬಳಕೆಯನ್ನು ಕೈಬಿಟ್ಟು ಬ್ಯಾಲೆಟ್ ಪೇಪರ್ಗೆ ಮರಳಿವೆ. ಮುಂದಿನ ದಿನಗಳಲ್ಲೂ ಬ್ಯಾಲೆಟ್ ಪೇಪರ್ಗಳೇ ಸೂಕ್ತ ವಿಧಾನವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು
Advertisement