ರಾಜ್ಯದಲ್ಲಿ ಸಫಾರಿ ನಿಷೇಧ: ತಮಿಳುನಾಡು ಕೇರಳದತ್ತ ಮುಖಮಾಡಿದ ಪ್ರವಾಸಿಗರು; ರೆಸಾರ್ಟ್‌ಗಳ ಸಂಘ ಕಳವಳ

ಹುಲಿ ಮತ್ತು ಚಿರತೆ ದಾಳಿಯಿಂದ ಮಾನವ ಸಾವುನೋವುಗಳು ಹೆಚ್ಚಳವಾದ ನಂತರ, ಕರ್ನಾಟಕ ಸರ್ಕಾರ, ಎರಡು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ನಿಷೇಧಿಸಿ ಆದೇಶ ಹೊರಡಿಸಿದೆ.
Safari ban in Karnataka driving tourists to Kerala, TN: Eco-Tourism Resorts Association
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಇಲಾಖೆಗೆ ಪ್ರಮುಖ ಆದಾಯದ ಮೂಲವಾಗಿರುವ ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರವಾಸಿಗರಿಗೆ ಸಫಾರಿ ನಿಷೇಧಿಸಲಾಗಿದೆ. ಈ ನಿರ್ಧಾರವು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಸಾವಿರಾರು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದ್ದು, ಸ್ಥಳೀಯರು ಸಫಾರಿಯನ್ನು ಮತ್ತೆ ಆರಂಭಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

"ನಾವು ಕರ್ನಾಟಕದಲ್ಲಿ ಸಫಾರಿಗೆ ಅವಕಾಶ ನೀಡಲು ಸಾಧ್ಯವಾಗದ ಕಾರಣ, ಕೇರಳ ಮತ್ತು ತಮಿಳುನಾಡು ಇದರ ಪ್ರಯೋಜನ ಪಡೆಯುತ್ತಿವೆ. ಪ್ರವಾಸಿಗರು ರಣಥಂಬೋರ್, ಕಾರ್ಬೆಟ್ ಮತ್ತು ಇತರ ಸ್ಥಳಗಳ ಸಫಾರಿಗಳತ್ತ ಮುಖ ಮಾಡುತ್ತಿದ್ದಾರೆ" ಎಂದು KETRA ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಹುಲಿ ಮತ್ತು ಚಿರತೆ ದಾಳಿಯಿಂದ ಮಾನವ ಸಾವುನೋವುಗಳು ಹೆಚ್ಚಳವಾದ ನಂತರ, ಕರ್ನಾಟಕ ಸರ್ಕಾರ, ಎರಡು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿ ನಿಷೇಧಿಸಿ ಆದೇಶ ಹೊರಡಿಸಿದೆ.

ಡಿಸೆಂಬರ್‌ನಲ್ಲಿ, ಸಫಾರಿಗಳನ್ನು ಹಂತ ಹಂತವಾಗಿ ಮತ್ತೆ ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ. ಸಾಗಣೆ ಸಾಮರ್ಥ್ಯದ ಕುರಿತು ವರದಿಯನ್ನು ತಯಾರಿಸಲು ನಿರ್ದೇಶನ ಸಹ ನೀಡಿದೆ.

Safari ban in Karnataka driving tourists to Kerala, TN: Eco-Tourism Resorts Association
ನಿಷೇಧದ ನಡುವೆಯೂ ಕಬಿನಿಯಲ್ಲಿ ಅಕ್ರಮ ಬೋಟ್ ಸಫಾರಿ: ಪರಿಸರವಾದಿಗಳ ಕಳವಳ

KETRA ಅಡಿಯಲ್ಲಿ ಸುಮಾರು 35 ರೆಸಾರ್ಟ್‌ಗಳು ನೋಂದಾಯಿಸಲ್ಪಟ್ಟಿವೆ. "ಬಂಡೀಪುರ-ನಾಗರಹೊಳೆ ಪ್ರದೇಶದ ಸದಸ್ಯರ ರೆಸಾರ್ಟ್‌ಗಳು ಮತ್ತು ಸಂಬಂಧಿತ ಪ್ರವಾಸೋದ್ಯಮವು ದಿನಕ್ಕೆ ಸುಮಾರು 3 ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಈ ವರ್ಷ ಹಲವಾರು ರೆಸಾರ್ಟ್ ಗಳಲ್ಲಿ ಆಕ್ಯುಪೆನ್ಸಿ ಶೇ. 50 ರಿಂದ 80 ರಷ್ಟು ಕಡಿಮೆಯಾಗಿದೆ" ಎಂದು ಕಬಿನಿಯಲ್ಲಿರುವ ಕೆಟ್ರಾ ಸದಸ್ಯ ಮತ್ತು ರೆಸಾರ್ಟ್ ಮಾಲೀಕ ಥಾಮಸ್ ಎಮ್ಯಾನುಯೆಲ್ ರಾಮಪುರಂ ಅವರು ಹೇಳಿದ್ದಾರೆ.

ದೂರದ ದೇಶ ಹಾಗೂ ರಾಜ್ಯದಿಂದ ಬರುವವರು ಬಂಡೀಪುರ ಸಫಾರಿ ಆನಂದಿಸಿ ಬಳಿಕ ಕರ್ನಾಟಕದ ವಿವಿಧ ಭಾಗಗಳಿಗೆ ತೆರಳುತ್ತಾರೆ. ಆದರೆ ಇದೀಗ ಸಫಾರಿಯನ್ನು ನಿಲ್ಲಿಸಿರುವುದರಿಂದ, ಕರ್ನಾಟಕದ ಬದಲು ಇತರ ಯಾವ ರಾಜ್ಯದಲ್ಲಿ ಸಫಾರಿ ನಡೆಯುತ್ತಿದೆಯೋ ಅಲ್ಲಿಗೆ ಹೋಗಲು ಬಯಸುತ್ತಿದ್ದಾರೆ.

ಈ ರೀತಿ ಮಾಡುವುದರಿಂದ, ಬಂಡೀಪುರ, ನಾಗರಹೊಳೆ ಭಾಗವಷ್ಟೇ ಅಲ್ಲದೇ ರಾಜ್ಯದ ವಿವಿಧ ಪ್ರವಾಸೋದ್ಯಮ ಪ್ರದೇಶಗಳಿಗೂ ಪ್ರವಾಸಿಗರ ಸಂಖ್ಯೆ ಕ್ರಮೇಣ ಕ್ಷೀಣಿಸುವುದು ನಿಶ್ಚಿತ. ಸಂಖ್ಯೆ ಕ್ಷೀಣಿಸಲು ಸಮಯ ಹಿಡಿದರೂ, ಆ ಭಾಗದಲ್ಲಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಕುಟುಂಬಗಳಿಗೆ ಭವಿಷ್ಯದಲ್ಲಿ ಬಹುದೊಡ್ಡ ನಷ್ಟ ಎಂದು KETRA ಸದಸ್ಯರು ಹೇಳಿದ್ದಾರೆ.

ಸಫಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದು ಇದೇ ಮೊದಲು ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ, ಬಿಶ್ವಜಿತ್ ಮಿಶ್ರಾ ಅವರು ಹೇಳಿದ್ದು, ಈ ಬಗ್ಗೆ ಸರ್ಕಾರ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com