

ಮೈಸೂರು: ಮುಡಾ (Muda Case) ನಿವೇಶನ ಹಂಚಿಕೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ನನಗೆ ಹಣದ ಆಮಿಷವೊಡ್ಡಿ ಮುಡಾ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡ್ತಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧವೂ ಸ್ನೇಹಮಯಿ ಕೃಷ್ಣ ಕಮಿಷನ್ ಆರೋಪದ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ಅವರು ನನ್ನನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದು, ನನಗೆ ಹಣದ ಆಮಿಷವೊಡ್ಡಿ ಮುಡಾ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಸಿದರು ಎಂದು ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ. ಈ ಸಂಬಂಧ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ.
ಆಡಿಯೋ ಕ್ಲಿಪ್ ರಿಲೀಸ್ ಮಾಡಿದ ಸ್ನೇಹಮಯಿ ಕೃಷ್ಣ
ಮುಡಾ ನಿವೇಶನ ಹಂಚಿಕೆ ವೇಳೆ ನಿಯಮ ಗಾಳಿಗೆ ತೂರಿ ಬೇಕಾಬಿಟ್ಟಿ ಸೈಟು ಹಂಚಿದ್ದ ಆರೋಪ ಡಿಬಿ ನಟೇಶ್ ಮೇಲಿದ್ದು, ಸದ್ಯ ಅವರು ಲೋಕಾಯುಕ್ತ ಹಾಗೂ ಇಡಿ ತನಿಖೆ ಎದುರಿಸುತ್ತಿದ್ದಾರೆ. ಅವರು ಆಪ್ತರಿಗೆ ಕರೆ ಮಾಡಿ ಮಾತಾಡಿ, ಸ್ನೇಹಮಯಿ ಕೃಷ್ಣ ಅವರನ್ನು ಭೇಟಿ ಮಾಡಿಸಿ ಮಾತಾಡೋಣ ಎಂದಿದ್ದಾರಂತೆ. ಇದಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್ ನ್ನು ಬಿಡುಗಡೆ ಮಾಡಿದ್ದಾರೆ. ಡಿಬಿ ನಟೇಶ್ ಅವರು ನನ್ನನ್ನು ಯಾಕೆ ನೋಡಬೇಕು, ನನ್ನ ಜೊತೆ ನಟೇಶ್ಗೆ ಎಂಥಾ ಮಾತು? ಎಂದು ಸ್ನೇಹಮಯಿ ಪ್ರಶ್ನೆ ಮಾಡಿದ್ದಾರೆ.
ಯಾವುದೇ ಆಮಿಷಕ್ಕೆ ಬಲಿಯಾಗಲ್ಲ
ನನಗೆ ಹಣದ ಆಮಿಷ ತೋರಿಸಿ ಮುಡಾ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ. ನಾನು ಯಾವುದೇ ಆಮಿಷಕ್ಕೆ ಬಲಿಯಾಗಲ್ಲ. ಮುಡಾ ಹೋರಾಟದಲ್ಲಿ ನನ್ನ ಕಾನೂನು ಹೋರಾಟ ಮುಂದುವರೆಯುತ್ತದೆ ಎಂದು ಸ್ನೇಹಮಯಿ ಕೃಷ್ಣ ಗುಡುಗಿದ್ದಾರೆ.
ಶಾಲಿನಿ ರಜನೀಶ್ ವಿರುದ್ಧವೂ ಗಂಭೀರ ಆರೋಪ
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕೋಟ್ಯಂತರ ಹಣ ಕೊಟ್ಟು ನಟೇಶ್ ಮುಂಬಡ್ತಿ ಪಡೆದಿದ್ದಾರೆ. ಮುಂಬಡ್ತಿಗಾಗಿ ಶಾಲಿನಿ ರಜನೀಶ್ ಅವರಿಗೆ ಹಣ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಇದಕ್ಕೆ ಬೇಕಾದ ದಾಖಲೆಗಳು ನನ್ನ ಬಳಿ ಇವೆ. ಎಲ್ಲವನ್ನೂ ಕೂಡ ನಾನು ಕೋರ್ಟ್ ಗೆ ಸಲ್ಲಿಸುತ್ತೇನೆ. ಮುಡಾದಲ್ಲಿ ಆಯುಕ್ತರಾಗಿದ್ದ ದಿನೇಶ್ ರನ್ನು ಸಸ್ಪೆಂಡ್ ಮಾಡಿ ನಟೇಶ್ ಗೆ ಮುಂಬಡ್ತಿ ಕೊಡ್ತಾರೆ. ಹಣದ ವಹಿವಾಟು ಬಗ್ಗೆಯೂ ನಾನು ಕೋರ್ಟ್ ನಲ್ಲಿ ಹೇಳುತ್ತೇನೆ ಎಂದಿದ್ದಾರೆ. ಈ ಕುರಿತು ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದೇನೆ. ಈಗ ಹಣ ಪಡೆದು ಮುಂಬಡ್ತಿ ಕೊಟ್ಟಿಲ್ಲ ಅಂತ ಶಾಲಿನಿ ರಜನೀಶ್ ಅವರು ಹೇಳಲಿ ಎಂದು ಸವಾಲು ಹಾಕಿದರು.
Advertisement