

ಗದಗ: ಗದಗ ಜಿಲ್ಲೆಯ ಐತಿಹಾಸಿಕ ದೇವಾಲಯಗಳಲ್ಲಿ ಮೂರ್ತಿಗಳನ್ನು ಹಾನಿಗೊಳಿಸುವ ಘಟನೆಗಳು ಮತ್ತೆ ಮುಂದುವರೆದಿದೆ.
ಕಳೆದ ಎರಡು ದಿನಗಳಲ್ಲಿ ಮಲ್ಲಿಕಾರ್ಜುನಪುರದ ಶಿವಾಲಯದಲ್ಲಿನ ಶಿವಲಿಂಗ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ಆದ್ರಹಳ್ಳಿ ಸಮೀಪದ ಮಾರಿಯಮ್ಮ ದೇವಿ ಮೂರ್ತಿಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಮೂರ್ತಿಗಳ ಮುಖಕ್ಕೆ ಮಸಿ ಬಳಿದು ಭಾಗಶಃ ಹಾನಿಗೊಳಿಸಲಾಗಿದ್ದು, ವಿಕೃತವಾಗಿ ಕಾಣುವಂತೆ ಮಾಡಲಾಗಿದೆ.
ಲಕ್ಕುಂಡಿಯಲ್ಲಿ ನಿಧಿ ಪತ್ತೆಯ ಸುದ್ದಿ ಹರಡಿದ ಬಳಿಕ ಗ್ರಾಮ ಹೊರವಲಯದ ಹಾಗೂ ಐತಿಹಾಸಿಕ ದೇವಾಲಯಗಳನ್ನು ದುಷ್ಕರ್ಮಿಗಳು ಗುರಿಯಾಗಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ವಾರ ಮುಂಡರಗಿ ತಾಲ್ಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ತುಂಗಭದ್ರಾ ನದಿ ತೀರದಲ್ಲಿದ್ದ ಶಿವ ಹಾಗೂ ನಂದಿ ಮೂರ್ತಿಗಳನ್ನು ವಿರೂಪಗೊಳಿಸಲಾಗಿತ್ತು.
ಜಿಲ್ಲೆಯಲ್ಲಿ ಮೂರ್ತಿ ಹಾನಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ಮತ್ತು ಮುಂಡರಗಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶಿವರಾತ್ರಿ ದಿನ ಸಿಂಗಟಾಲೂರಿನಲ್ಲಿ ಶಿವಲಿಂಗ, ನಂದಿ ಹಾಗೂ ಹೊನ್ನತಮ್ಮ ಮೂರ್ತಿಗಳ ವಿರೂಪಗೊಳಿಸಿದ ಘಟನೆ ಜಿಲ್ಲೆಯಾದ್ಯಂತ ಆಘಾತ ಮೂಡಿಸಿದ್ದರೆ, ಇತ್ತೀಚಿನ ಘಟನೆಗಳು ಭಕ್ತರ ಮನಸ್ಸಿಗೆ ಆಘಾತ ತಂದಿವೆ.
ಸುದ್ದಿ ಹರಡುತ್ತಿದ್ದಂತೆ ನೂರಾರು ಗ್ರಾಮಸ್ಥರು ದೇವಾಲಯಗಳ ಬಳಿ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಆಗ್ರಹಿಸಿದ್ದಾರೆ.
ಈ ಕುರಿತು ಗದಗ ಎಸ್ಪಿ ರೋಹನ್ ಜಗದೀಶ್ ಮಾತನಾಡಿ, ತನಿಖೆಗೆ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಕೃತ್ಯಗಳು ಅಶಾಂತಿ ಸೃಷ್ಟಿಸಲು ಅಥವಾ ನಿಧಿ ಹುಡುಕಲು ಮಾಡಿರುವಂತೆ ತೋರುತ್ತಿಲ್ಲ. ದುಷ್ಕರ್ಮಿಗಳು ಮಾನಸಿಕ ಅಸ್ವಸ್ಥರಾಗಿರುವ ಸಾಧ್ಯತೆ ಇದೆ. ಆದರೆ ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ನಿರ್ಣಯಕ್ಕೆ ಬರಲಾಗದು. ಶೀಘ್ರದಲ್ಲೇ ತಪ್ಪಿತಸ್ಥರನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.
Advertisement