

ಬೆಂಗಳೂರು: ಪರಿಸರ ಸಂರಕ್ಷಣೆಯಲ್ಲಿ ಉತ್ತಮ ಸಾಧನೆ ತೋರಿದ ಕರ್ನಾಟಕದ ವಿವಿಧ ಜಿಲ್ಲೆಗಳ 10 ಸರ್ಕಾರಿ ಶಾಲೆಗಳಿಗೆ ‘ಬೆಸ್ಟ್ ಸ್ಕೂಲ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಿಷನ್ ಪ್ರಕೃತಿ: ಫ್ರಮ್ ಕ್ಲಾಸ್ರೂಮ್ ಟು ಕನ್ಸರ್ವೇಷನ್ - ಲೀಡಿಂಗ್ ದಿ ಚೇಂಜ್ ಇನಿಶಿಯೇಟಿವ್ ಅಡಿಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ (SSK) ಹಾಗೂ ಡಬ್ಲ್ಯುಡಬ್ಲ್ಯುಎಫ್–ಇಂಡಿಯಾ (WWF-India) ಜಂಟಿಯಾಗಿ ಈ ಪ್ರಶಸ್ತಿಗಳನ್ನು ವಿತರಿಸಿವೆ.
ಬೆಂಗಳೂರಿನ ವಿಕಾಸ್ ಸೌಧದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಜೇತ ಶಾಲೆಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದಬಾರದು, ವಿಷಯಗಳನ್ನು ಅರ್ಥಮಾಡಿಕೊಳ್ಳುವತ್ತ ಗಮನ ಕೊಡಬೇಕು. ಜಾಗೃತಿ ಹೆಚ್ಚಿದಂತೆ ಫಲಿತಾಂಶಗಳು ಸ್ವತಃ ಉತ್ತಮವಾಗುತ್ತವೆ ಎಂದು ಹೇಳಿದರು.
ಇದೇ ವೇಳೆ ಜಪಾನ್ನ ತ್ಯಾಜ್ಯ ನಿರ್ವಹಣಾ ಪದ್ಧತಿಯನ್ನು ಉದಾಹರಿಸಿದ ಅವರು, “ಅಲ್ಲಿ ನಾಗರಿಕರು ಕಸವನ್ನು ಜವಾಬ್ದಾರಿಯಿಂದ ಸಂಗ್ರಹಿಸಿ ವಿಲೇವಾರಿ ಮಾಡುತ್ತಾರೆ. ಆ ರೀತಿಯ ಶಿಸ್ತು ಇಲ್ಲಿ ಸಹ ಬೆಳೆಸಬೇಕು ಎಂದು ತಿಳಿಸಿದರು.
ಇದೇ ವೇಳೆ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಮೊದಲ ಹಂತವಾಗಿದೆ ಎಂದ ಅವರು, ಮುಂದಿನ ವರ್ಷದಿಂದ 1ರಿಂದ 10ನೇ ತರಗತಿವರೆಗೆ ನೈತಿಕ ವಿಜ್ಞಾನ ಪಠ್ಯಪುಸ್ತಕ ಪರಿಚಯಿಸಲಾಗುವುದು ಎಂದು ಘೋಷಿಸಿದರು.
ಬಳಿಕ ಸರ್ಕಾರಿ ಶಾಲಾ ಶಿಕ್ಷಕರ ಶ್ರಮ ಮತ್ತು ಸಾಧನೆಯನ್ನು ಪ್ರಶಂಸಿಸಿದ ಸಚಿವರು, ವಿದ್ಯಾರ್ಥಿಗಳು ಸರ್ಕಾರ ಒದಗಿಸುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಂತರಮಿಷನ್ ಪ್ರಕೃತಿ ಕಾರ್ಯಕ್ರಮದಡಿ ವನ್ಯಜೀವಿ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಯ ಮಹತ್ವವನ್ನು ಕಲಿತ ಅನುಭವಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡರು.
ಪ್ರಶಸ್ತಿ ವಿಜೇತ 10 ಶಾಲೆಗಳು ಇಂತಿವೆ...
ಜಿ.ಎಂ.ಪಿ.ಎಚ್.ಎಸ್, ಎಮ್ಮಿಗನೂರು, ಬಳ್ಳಾರಿ.
ಜಿ.ಕೆ.ಎಚ್.ಪಿ.ಎಸ್, ಕಾತ್ರಾಳ, ಕಾಗವಾಡ, ಬೆಳಗಾವಿ.
ಜಿ.ಎಚ್.ಎಸ್, ಅಲಿಪುರ, ಚಿಕ್ಕಬಳ್ಳಾಪುರ.
ಜಿ.ಎಚ್.ಪಿ.ಎಸ್, ಹಿರೇಗೋಣಿಗೆರೆ, ದಾವಣಗೆರೆ.
ಜಿ.ಎಚ್.ಪಿ.ಎಸ್, ಜೋಡಳ್ಳಿ, ಕಲಘಟಗಿ.
ಕೆ.ಪಿ.ಎಸ್, ಕೋಟೇಶ್ವರ, ಕುಂದಾಪುರ, ಉಡುಪಿ.
ಡಿ.ಕೆ.ಜೆಡ್.ಪಿ, ಅಳಿಯೂರು, ದಕ್ಷಿಣ ಕನ್ನಡ.
ಕೆ.ಎಸ್.ಎಸ್ ಜಿ.ಎಚ್.ಎಸ್, ಹಕ್ಲಾಡಿ, ಬೈಂದೂರು, ಉಡುಪಿ.
ಕೆ.ಜಿ.ಬಿ.ವಿ, ಯಳಂದೂರು, ಚಾಮರಾಜನಗರ.
ಜಿ.ಎಚ್.ಪಿ.ಎಸ್, ಮಲ್ಲೂರು, ಉಡುಪಿ.
Advertisement