ಬೆಳಗಾವಿ: ಗುರುವಾರ ಮತ್ತೆ ನಾಲ್ವರು ಸಾವಿಗೀಡಾಗಿದ್ದು, ಇಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೈಲಹೊಂಗಲ ತಾಲ್ಲೂಕಿನ ಮರಕುಂಬಿ ಗ್ರಾಮದ ಬಳಿಯ ಇನಾಮ್ದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಆರಂಭದಲ್ಲಿ ಮೂವರು ಮೃತಪಟ್ಟಿದ್ದರು. ಮೃತ ಮೂವರನ್ನು ಜಮಖಂಡಿಯ ಅಕ್ಷಯ ಚೋಪಡೆ (45), ನೇಸರಗಿಯ ದೀಪಕ್ ಮುನವಳ್ಳಿ (31), ಖಾನಾಪುರ ತಾಲ್ಲೂಕಿನ ಚಿಕ್ಕಮುನವಳ್ಳಿಯ ಸುದರ್ಶನ ಬನೋಶಿ (25) ಎಂದು ಗುರುತಿಸಲಾಗಿದೆ.
ಕಬ್ಬಿನ ರಸವನ್ನು ಕುದಿಸಲು ಬಳಸುವ 40 ಅಡಿ ಎತ್ತರದ ಪಾತ್ರೆಯಾದ AVCP ನಂ. 1 ರ ದುರಸ್ತಿ ಕಾರ್ಯದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಕಾರ್ಖಾನೆ ಅಧಿಕಾರಿಗಳ ಪ್ರಕಾರ, ದುರಸ್ತಿಗೆ ಮುಂಚಿತವಾಗಿ ಘಟಕವನ್ನು ಮುಚ್ಚಲಾಗಿತ್ತು. ಆದಾಗ್ಯೂ, ಕಾರ್ಮಿಕರು ನಿರ್ವಹಣೆಗಾಗಿ ಕರ್ಫ್ಯೂ ಗೋಡೆಯಿಂದ ನಟ್ ಮತ್ತು ಬೋಲ್ಟ್ಗಳನ್ನು ತೆಗೆಯುತ್ತಿದ್ದಾಗ, ಬಿಸಿನೀರು ಇದ್ದಕ್ಕಿದ್ದಂತೆ ವಾಲ್ವ್ ಮೂಲಕ ಚಿಮ್ಮಿ ಕೆಳಗೆ ಕೆಲಸ ಮಾಡುತ್ತಿದ್ದವರ ಮೇಲೆ ಬಿದ್ದಿದೆ.
ಈ ನೀರು ಕಾರ್ಮಿಕರ ಮೇಲೆ ಬಿದ್ದಾಗ ಅವರು ನೋವಿನಿಂದ ಕಿರುಚುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಹೋದ್ಯೋಗಿಗಳು ತಕ್ಷಣ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿಯೇ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ನಂತರ ಇನ್ನೊಬ್ಬರು ಸಾವಿಗೀಡಾಗಿದ್ದಾರೆ.
ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಮಿಕರಿಗೆ ಗಂಭೀರ ಸುಟ್ಟಗಾಯಗಳಾಗಿದ್ದು, ಆರಂಭದಲ್ಲಿ ಸ್ಥಳೀಯವಾಗಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತ್ ಬಸಪ್ಪ ಸಾರವಾಡಿ (27), ಗೋಕಾಕದ ರಾಘವೇಂದ್ರ ಗಿರಿಯಾಳ್ (35), ಅಥಣಿಯ ಮಂಜು ತೇರದಾಳ (35), ಬೈಲಹೊಂಗಲದ ಅರವಳ್ಳಿಯ ಮಂಜು ಕಾಜಗಾರ (28), ಬಾಗಲಕೋಟೆ ಜಿಲ್ಲೆಯ ಮರೇಗುದ್ದಿಯ ಗುರು ತಮ್ಮಣ್ಣವರ ಗಾಯಗೊಂಡವರು. ಈ ಪೈಕಿ ಚಿಕಿತ್ಸೆಗೆ ಸ್ಪಂದಿಸದೆ ಇಂದು ನಾಲ್ವರು ಸಾವಿಗೀಡಾಗಿದ್ದು, ಮತ್ತೋರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುರ್ಗೋಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಐಎಂ ಮಠಪತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ಸುರಕ್ಷತಾ ಮುನ್ನೆಚ್ಚರಿಕೆಗಳ ಹೊರತಾಗಿಯೂ ಬಿಸಿನೀರು ಹೇಗೆ ಸೋರಿಕೆಯಾಯಿತು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.
Advertisement