

ಹುಬ್ಬಳ್ಳಿ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೃತ್ಯದ ವಿಡಿಯೋವನ್ನು ಹಂಚಿಕೊಂಡಿದ್ದ ಮೂವರು ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಮಹಿಳೆಗೆ ಮದ್ಯ ಕುಡಿಸಿ ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಸಂತ್ರಸ್ತೆ ನೀಡಿದ್ದ ದೂರಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಕಾಮುಕರು ಕೃತ್ಯದ ವಿಡಿಯೋ ಕೂಡ ಮಾಡಿಕೊಂಡು ಅದನ್ನು ಹರಿಬಿಟ್ಟಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಶಿವಾನಂದ (29) ಮತ್ತು ಗಣೇಶ್ ಗಿಡ್ಡಣ್ಣವರ (31) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಶಿವಶಂಕರ ಕಾಲೋನಿ ನಿವಾಸಿಗಳಾಗಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿದ್ದು, 'ಜ.9ರಂದು ಅಂಬೇಡ್ಕರ್ ಮೈದಾನದಿಂದ ಇಬ್ಬರು ಯುವಕರು ಆಟೋದಲ್ಲಿ ಮಹಿಳೆಯನ್ನು ಕರೆದೊಯ್ದಿದ್ದರು. ಮದ್ಯ ಕುಡಿಸಿ ಅನುಚಿತವಾಗಿ ವರ್ತಿಸಿ ವಿಡಿಯೋ ಮಾಡಿಕೊಂಡಿದ್ದಾರೆ.
ಒಂದು ದಿನದ ನಂತರ ಮಹಿಳೆ ಠಾಣೆಗೆ ಬಂದು ಅತ್ಯಾಚಾರ ಮಾಡಿ ವಿಡಿಯೋ ಮಾಡಿ ಹರಿಬಿಟ್ಟ ಬಗ್ಗೆ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ಆರೋಪಿಗಳಾದ ಶಿವಾನಂದ, ಗಣೇಶ್ಗೆ ಸ್ಥಳೀಯರು ಥಳಿಸಿದ್ದಾರೆ. ಕಟ್ಟಿಹಾಕಿ ತಲೆ ಬೋಳಿಸಿದ್ದಾರೆ. ಹಲ್ಲೆ ಸಂಬಂಧ ನಾಲ್ವರ ವಿರುದ್ಧ ದೂರು ದಾಖಲಾಗಿದೆ' ಎಂದು ತಿಳಿಸಿದ್ದಾರೆ.
ಆರೋಪಿಗೆ ಥಳಿಸಿದವರ ಮೇಲೆಯೇ ಪ್ರಕರಣ
ಇನ್ನು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದ ನಾಲ್ವರ ವಿರುದ್ಧವೂ ದೂರು ದಾಖಲಾಗಿದ್ದು, ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ ನಗರದ ಶಿವಶಂಕರ ಕಾಲೋನಿಯ ನಾಲ್ವರ ವಿರುದ್ಧ ಪ್ರಕರಣ ಖಂಡಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಬಳಿ ಸ್ಥಳೀಯರು ಕಿಡಿ ಕಾರಿದ್ದಾರೆ. ಆರೋಪಿಗಳನ್ನು ಹಿಡಿದು ಕೊಟ್ಟವರ ವಿರುದ್ಧ ಕೇಸ್ ಹಾಕಲಾಗಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಆರೋಪಿಗಳ ತಲೆ ಬೋಳಿಸಿದ ಸ್ಥಳೀಯರು
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸಿಟ್ಟಿಗೆದ್ದು ಆರೋಪಿಗಳನ್ನು ಥಳಿಸಿದ ಘಟನೆ ಕೂಡ ನಡೆದಿದೆ. ಹುಬ್ಬಳ್ಳಿ ನಗರದ ಶಿವಶಂಕರ್ ಕಾಲೋನಿ ನಿವಾಸಿಗಳು ರೇಪ್ ಮಾಡಿದ ಆರೋಪಿಗಳಿಬ್ಬರ ತಲೆ ಬೋಳಿಸಿದ್ದರು. ಆರೋಪಿಗಳಾದ ಗಣೇಶ್ ಮತ್ತು ಶಿವಾನಂದ ತಲೆ ಮೀಸೆ ಬೋಳಿಸಿ ತಮ್ಮ ಬಡಾವಣೆ ಮರ್ಯಾದೆ ಹಾಳು ಮಾಡಿದ್ದೀರಿ ಅಂತ ಆಕ್ರೋಶ ಹೊರಹಾಕಿದ್ದರು. ಆರೋಪಿಗಳನ್ನು ಹಿಡಿದು ತಲೆ, ಮೀಸೆ ಬೋಳಿಸಿ ಥಳಿಸಿದ್ದರು. ನಂತರ ಪೊಲೀಸರಿಗೆ ಆರೋಪಿಗಳನ್ನು ಒಪ್ಪಿಸಿದ್ದರು.
ಸ್ಥಳೀಯರ ಪ್ರತಿಭಟನೆ
ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದವರನ್ನೇ ಇದೀಗ ಬಂಧಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸ್ ಠಾಣೆ ಎದುರು ತಾಂಡಾ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದಾರೆ.
Advertisement