

ಬೆಂಗಳೂರು: ಸುಪ್ರೀಂಕೋರ್ಟ್ ಸೂಚಿಸಿದ ನಂತರ ರಾಜ್ಯ ಸರ್ಕಾರ ದಯಾಮರಣಕ್ಕೆ ಕಾನೂನು ತಂದಿದ್ದರೂ ಈವರೆಗೂ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿಲ್ಲ ಎಂದು ದಯಾಮರಣ ಹೋರಾಟಗಾರ್ತಿ ಎಚ್.ಬಿ.ಕರಿಬಸಮ್ಮ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಘನತೆಯಿಂದ ಬದುಕುವ ಹಕ್ಕಿದೆ. ಅದೇ ರೀತಿ ಅಸಹನೀಯ ನೋವು ಮತ್ತು ಯಾತನೆಯ ಸಂದರ್ಭಗಳಲ್ಲಿ ಗೌರವಯುತವಾಗಿ ಸಾಯುವ ಹಕ್ಕೂ ಇರಬೇಕು. ಸುಪ್ರೀಂಕೋರ್ಟ್ ಸೂಚನೆ ಬಳಿಕ ದಯಾಮರಣಕ್ಕೆ ರಾಜ್ಯ ಸರ್ಕಾರ ಕಾನೂನು ಜಾರಿಗೆತಂದಿದೆ. ಆದರೆ,ಕಾನೂನು ಚೌಕಟ್ಟನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಡವರಿಗೆ ಸುಲಭವಾಗಿ ಲಭ್ಯವಿರುವ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ದಯಾಮರಣ ಪ್ರಕ್ರಿಯೆ ಲಭ್ಯವಾಗಬೇಕು. ಆರ್ಥಿಕ ಹಾಗೂ ಸಾಮಾಜಿಕ ಬೆಂಬಲವಿಲ್ಲದ ಸಾವಿರಾರು ಬಡ ಹಾಗೂ ವೃದ್ಧರು ಹಲವು ರೋಗಗಳಿಂದ ಬಳಲುತ್ತಿದ್ದು, ಜೀವನದ ಕೊನೆಯ ದಿನಗಳನ್ನು ಅತಿಯಾದ ನೋವು, ಅಸಹಾಯಕತೆ ಮತ್ತು ಹಾಸಿಗೆಯಲ್ಲೇ ಅವಲಂಬಿತರಾಗಿ ಕಳೆಯುವಂತಾಗಿದೆ.
ದಯಾಮರಣಕ್ಕಾಗಿ ಎಲ್ಲಿಗೆ ಅರ್ಜಿ ಸಲ್ಲಿಸಬೇಕು, ಯಾವ ಆಸ್ಪತ್ರೆಗೆ ಹೋಗಬೇಕು ಎಂಬ ಸ್ಪಷ್ಟತೆ ಇಲ್ಲದ ಕಾರಣ ಅನೇಕ ವೃದ್ಧರು ಸಹಾಯವಿಲ್ಲದೆ ಯಾತನೆಯಲ್ಲೇ ಸಾವನ್ನಪ್ಪುತ್ತಿದ್ದಾರೆ,
ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟ ಮಾರ್ಗಸೂಚಿಗಳನ್ನು ತಕ್ಷಣ ಹೊರಡಿಸಿ, ವಿಳಂಬ ಮಾಡದೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸಂಕಷ್ಟದಲ್ಲಿರುವ ವೃದ್ಧರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ತಮ್ಮ ವೈಯಕ್ತಿಕ ಸ್ಥಿತಿಗತಿಯನ್ನು ಹಂಚಿಕೊಂಡ ಅವರು, ‘ನನಗೀಗ 86 ವರ್ಷ. ಎರಡು ದಶಕದಿಂದಲೂ ದಯಾಮರಣದ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದೇನೆ. ಅನೇಕ ರೋಗಗಳಿಂದ ನರಳಿ ನನಗೆ ಬದುಕು ಸಾಕಾಗಿದೆ. ರೋಗಗಳು ಉಲ್ಬಣಿಸಿ ಪರಾವಲಂಬಿಯಾಗಿ ಬದುಕುವ ಮುನ್ನವೇ ದೇಹದಲ್ಲಿ ಅಲ್ಪಸ್ವಲ್ಪ ಬಲ ಇರುವಾಗ ಕಾನೂನಾತ್ಮಕವಾಗಿಯೇ ಸಾವು ಬಯಸುತ್ತಿದ್ದೇನೆ. ಸರ್ಕಾರ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ದಯಾಮರಣದ ಸೌಲಭ್ಯಗಳು ಸಿಗುವಂತೆ ಮಾಡಬೇಕು’ ಎಂದು ಆಗ್ರಹಿಸಿದರು.
ದಾವಣಗೆರೆ ಜಿಲ್ಲಾಧಿಕಾರಿ, ಸ್ಥಳೀಯ ನ್ಯಾಯಾಲಯ, ರಾಜ್ಯಪಾಲರು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ವೈದ್ಯಕೀಯ ವರದಿಗಳೊಂದಿಗೆ ದಯಾಮರಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದೇನೆ. ಅನುಮತಿ ನಿರಾಕರಿಸಿದರೆ, ಕೋಟ್ಯಂತರ ವೃದ್ಧರ ಪರವಾಗಿ ನನ್ನ ಜೀವವನ್ನು ನಾನೇ ಅಂತ್ಯಗೊಳಿಸುತ್ತೇನೆಂದು ಹೇಳಿದ್ದಾರೆ.
Advertisement