

ಬೆಂಗಳೂರು: ರಾಜ್ಯ ಅರಣ್ಯ ಇಲಾಖೆ ವತಿಯಿಂದ ನಡೆಯುತ್ತಿರುವ ಹುಲಿ ಗಣತಿ ಕಾರ್ಯವು ರಾಜ್ಯದಲ್ಲಿ ಹುಲಿಗಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳುವುದಷ್ಟೇ ಅಲ್ಲದೆ, ರಕ್ಷಿಸಲ್ಪಟ್ಟ ಮತ್ತು ಸ್ಥಳಾಂತರಗೊಂಡ ಹುಲಿಗಳು ಮತ್ತು ಚಿರತೆಗಳನ್ನು ಇರಿಸಲು ಹೊಸ ಅರಣ್ಯ ಪ್ರದೇಶಗಳನ್ನು ಹುಡುಕುವುದನ್ನೂ ಒಳಗೊಂಡಿದೆ.
ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ರಕ್ಷಿಸಲ್ಪಟ್ಟ ವನ್ಯಜೀವಿಗಳನ್ನು ಶೀಘ್ರವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕಿದೆ. ಪ್ರತಿ ಪ್ರದೇಶದ ವಸತಿ ಸಾಮರ್ಥ್ಯವನ್ನು ವಿಶ್ಲೇಷಿಸಲಾಗುತ್ತಿದ್ದು, ಅಲ್ಲಿ ಹುಲಿ, ಚಿರತೆಗಳನ್ನು ಬಿಡಲು ಸಾಧ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು, ಜನನಿಬಿಡ ಅರಣ್ಯ ಪ್ರದೇಶಗಳು ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ,
ಹುಲಿಯೊಂದು ವಾಸಿಸಲು ಸರಾಸರಿ 10 ಚ.ಕಿಮೀ ಪ್ರದೇಶ ಬೇಕಾಗುತ್ತದೆ. ಆದರೆ ಕರ್ನಾಟಕದ ಪ್ರಮುಖ ಹುಲಿ ಮೀಸಲು ಪ್ರದೇಶಗಳಲ್ಲಿ ವಿಶೇಷವಾಗಿ ಬಂಡಿಪುರ ಹಾಗೂ ನಾಗರಹೊಳೆ, 5 ಚ.ಕಿಮೀ ಪ್ರದೇಶಕ್ಕೆ 4 ಹುಲಿಗಳಿವೆ. ಇತ್ತೀಚಿನ ಥರ್ಮಲ್ ಡ್ರೋನ್ ಚಿತ್ರಣಗಳಲ್ಲಿ 5 ಚ.ಕಿಮೀ ಪ್ರದೇಶದಲ್ಲಿ 4–5 ಹುಲಿಗಳು ಕಾಣಿಸಿಕೊಂಡಿದ್ದು, ಬಫರ್ ವಲಯಗಳಲ್ಲಿ ಮತ್ತು ಅರಣ್ಯ ಗಡಿಗಳಲ್ಲಿ ಸಂಖ್ಯೆಗಳು ಬದಲಾಗುತ್ತವೆ.
ಇನ್ನು ಚಿರತೆಗಳ ವಿಚಾರಕ್ಕೆ ಬಂದರೆ ದತ್ತಾಂಶ ಹೆಚ್ಚು ಕಳವಳಕಾರಿಯಾಗಿದೆ. ನಗರಪ್ರದೇಶಗಳಲ್ಲಿ ಮನುಷ್ಯರಿಗೆ ಹತ್ತಿರದಲ್ಲಿರುವುದು ಕಂಡು ಬಂದಿದೆ. ಕೆಲ ಭಾಗಗಳಲ್ಲಿ 4–5 ಚಿರತೆಗಳು ಒಂದೇ ಸ್ಥಳದಲ್ಲಿ ಕಂಡುಬಂದಿವೆ. ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯಗಳಿಗೆ ಈಗಾಗಲೇ ಹುಲಿಗಳ ಸಂಖ್ಯಾ ಹೆಚ್ಚಳವೇ ಸಮಸ್ಯೆಯ ಮೂಲವಾಗಿದ್ದು, ಅಲ್ಲಿ ರಕ್ಷಿಸಲಾದ ಹುಲಿಗಳನ್ನು ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅದೇ ರೀತಿ ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯಗಳಲ್ಲಿ ಮಾನವ ಹಸ್ತಕ್ಷೇಪ ಹೆಚ್ಚಿರುವುದರಿಂದ ಅಲ್ಲಿಗೂ ಹುಲಿಗಳನ್ನು ಬಿಡಲು ಸಾಧ್ಯವಿಲ್ಲ. ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೂ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಲಾಗಿದೆ. ಬೇಟೆಯ ನೆಲೆಯ ಬಗ್ಗೆ ನಮಗೆ ಖಚಿತವಿಲ್ಲದ ಕಾರಣ ಕಾಳಿ ಹುಲಿ ಮೀಸಲು ಪ್ರದೇಶಕ್ಕೆ ಬಿಡಲು ಸಾಧ್ಯವಿಲ್ಲ.
ಚಿರತೆಗಳ ಸ್ಥಳಾಂತರ ಇನ್ನಷ್ಟು ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿ ವಾರವೂ ಎಂಟು ರಿಂದ ಹತ್ತು ಚಿರತೆ ಪ್ರತ್ಯಕ್ಷ ಕುರಿತು ದೂರುಗಳು ಬರುತ್ತಿವೆ. ಬಹುತೇಕ ಸಂದರ್ಭಗಳಲ್ಲಿ ಚಿರತೆಗಳನ್ನು ಮತ್ತೆ ಕಾಡಿನೊಳಗೆ ಬಿಡಲಾಗುತ್ತಿದೆ, ಸಾರ್ವಜನಿಕ ಒತ್ತಡ ಹೆಚ್ಚಾದಾಗ ಮಾತ್ರ ಬಲೆ ಹಾಕಿ ಸೆರೆ ಹಿಡಿಯಲಾಗುತ್ತದೆ ಎಂದು ಹೇಳಿದ್ದಾರೆ.
ಅರಣ್ಯ ಇಲಾಖೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ (ವೈಲ್ಡ್ಲೈಫ್) ಬಿಶ್ವಜಿತ್ ಮಿಶ್ರ ಅವರು ಮಾತನಾಡಿ, ಪ್ರತಿ ಅರಣ್ಯ ಪ್ರದೇಶದ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ವಿವರವಾದ ಹಾಗೂ ವೈಜ್ಞಾನಿಕ ಅಧ್ಯಯನ ಕೈಗೊಳ್ಳಲಾಗುತ್ತಿದೆ. ಕಾಲಕ್ರಮೇಣ ಪರಿಸ್ಥಿತಿಗಳು ಬದಲಾಗಿರುವುದರಿಂದ ಹೊಸ ಅಧ್ಯಯನ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.
ಹುಲಿ ಮರಿ ಸೆರೆ
ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಬಳಿ ಕಾಣಿಸಿಕೊಂಡಿದ್ದ ಐದು ಹುಲಿಗಳ ಪೈಕಿ ಈ ಹಿಂದೆ ತಾಯಿ ಹುಲಿ ಸೆರೆಯಾಗಿತ್ತು, ಇದೀಗ 10 ತಿಂಗಳ ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಒಂದು ತಾಯಿ ಹುಲಿ ಹಾಗೂ 4 ಹುಲಿ ಮರಿಗಳನ್ನು ಸೆರೆಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು, ಬೆಂಗಳೂರು ಇವರು ಅನುಮತಿಯನ್ನು ನೀಡಿದ್ದರು.
ಅರಣ್ಯಾಧಿಕಾರಿಗಳ ಸೂಚನೆಯಂತೆ ಜನವರಿ 9 ರಂದು ತಾಯಿ ಹುಲಿಯನ್ನು ಕಾರ್ಯಾಚರಣೆ ಮೂಲಕ ಸೆರೆಹಿಡಿಯಲಾಗಿದ್ದು, 4 ಹುಲಿ ಮರಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯು ಮುಂದುವರೆಸಲಾಗಿತ್ತು. 4 ಹುಲಿ ಮರಿಗಳ ಪೈಕಿ ತಡರಾತ್ರಿ 10 ತಿಂಗಳ ಒಂದು ಹೆಣ್ಣು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದಿರುವ ಹುಲಿಯನ್ನು ಸುರಕ್ಷಿತವಾಗಿ ಇಡಲಾಗಿದ್ದು, ಅದರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಆರ್ಟಿಎಸ್ ಕಾರಿಡಾರ್ನಲ್ಲಿ ಚಿರತೆ ಪ್ರತ್ಯಕ್ಷ
ಧಾರವಾಡದ ಸತ್ತೂರು ಮತ್ತು ನವಲೂರು ನಡುವಿನ ಬಿಆರ್ಟಿಎಸ್ ಕಾರಿಡಾರ್ನಲ್ಲಿ ಶುಕ್ರವಾರ ರಾತ್ರಿ ಚಿರತೆ ಕಾಣಿಸಿಕೊಂಡಿದ್ದು, ಇದು ಸ್ಥಳೀಯರಲ್ಲಿ ಆತಂಕವನ್ನು ಹುಟ್ಟಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಹುಡುಕಾಟ ಆರಂಭಿಸಿದ್ದಾರೆ.
ಚಿರತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ನವಲೂರು, ಸತ್ತೂರು, ತಡಸಿನ್ಕೊಪ್ಪ ಮತ್ತು ಇತರ ಪ್ರದೇಶಗಳ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
Advertisement