

ಕಲಬುರಗಿ/ಯಾದಗಿರಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಅಮಾನ್ಯಗೊಂಡ 2000 ರೂಪಾಯಿ ನೋಟುಗಳ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿವೆ.
ಕಳೆದ ವರ್ಷ ಅಕ್ಟೋಬರ್ 22 ರಂದು ಚೋರ್ಲಾ ಘಾಟ್ನಲ್ಲಿ ದರೋಡೆ ನಡೆದಿದ್ದು, ಕೆಲವು ದಿನಗಳ ಹಿಂದೆ' ಸಂದೀಪ್ ದತ್ತ ಪಾಟೀಲ್ ನಾಸಿಕ್ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಎರಡು ಟ್ರಕ್ಗಳಲ್ಲಿ ಹಣವನ್ನು ಸಾಗಿಸುತ್ತಿದ್ದಾಗ ಆರು ಮಂದಿಯ ಗ್ಯಾಂಗ್ ಅಪಹರಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಈ ಘಟನೆಯಲ್ಲಿ ಬಿಜೆಪಿ ಆಡಳಿತದ ರಾಜ್ಯಗಳ ಪಾತ್ರವನ್ನು ಪ್ರಶ್ನಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಹಣವನ್ನು ಗುಜರಾತ್ ನಿಂದ ಹಣವನ್ನು ಗೋವಾಕ್ಕೆ ಹಣವನ್ನು ಸಾಗಿಸಲಾಗುತಿತ್ತು ಎನ್ನಲಾಗಿದೆ. ಆದರೆ ಅದು ಯಾರ ಹಣ ಎಂಬುದು ನಮಗೆ ತಿಳಿದಿಲ್ಲ. ಇದು ಕಾಂಗ್ರೆಸ್, ಬಿಜೆಪಿ, ಎನ್ಸಿಪಿ ಅಥವಾ ಶಿವಸೇನೆಗೆ ಸೇರಿದೆಯೇ ಎಂಬುರದ ಬಗ್ಗೆ ತನಿಖೆ ನಡೆಯಲಿ ಎಂದು ತಿಳಿಸಿದರು.
"ಬಿಜೆಪಿ ಸರ್ಕಾರಗಳು ಏನು ಮಾಡುತ್ತಿವೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಮೂರು ಸರ್ಕಾರಗಳ ಆಡಳಿತದಲ್ಲಿ ಈ ಘಟನೆ ಹೇಗೆ ನಡೆಯಿತು. ಅಮಾನ್ಯಗೊಂಡ 2000 ರೂ. ನೋಟುಗಳನ್ನು ಕಪ್ಪುಹಣದಿಂದ ಬಿಳಿ ಹಣಕ್ಕೆ ಪರಿವರ್ತಿಸಲು ತಿರುಪತಿಗೆ ಸಾಗಿಸಲಾಗುತಿತ್ತು ಎಂದು ಕೆಲ ಬಿಜೆಪಿ ಶಾಸಕರು ಹೇಳುತ್ತಿದ್ದಾರೆ. ಸರ್ಕಾರಗಳ ಬಳಿಯೂ ಇಲ್ಲದ ಮಾಹಿತಿ ಅವರಿಗೆ ಹೇಗೆ ತಿಳಿಯಿತು. ತಿರುಪತಿಯಲ್ಲಿ ಆಡಳಿತ ನಡೆಸುತ್ತಿರುವವರು ಯಾರು? ಈ ಪ್ರಶ್ನೆಗಳಿಗೆ ಕೇಂದ್ರವೇ ಉತ್ತರಿಸಬೇಕಿದೆ ಎಂದರು.
Gen Z ಮತ್ತು ಭಜನ್ ಕ್ಲಬ್ಗಳ ಬಗ್ಗೆ ಮಾತನಾಡಲು ಪ್ರಧಾನಿಗೆ ಸಮಯವಿದೆ. ಆದರೆ ಟ್ರಕ್ಗಳಲ್ಲಿ 400 ಕೋಟಿ ರೂ. ನಗದು ಸಾಗಣೆ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಲಗಿದ್ದಾರಾ? ಅವರು ಎಲ್ಲಿದ್ದಾರೆ," ಅವರು ಬಿಜೆಪಿ ನಾಯಕರು ಚುನಾವಣಾ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹಣದ ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಖರ್ಗೆ, 2000 ರೂ. ನೋಟು ಇನ್ನೂ ಏಕೆ ಚಾಲ್ತಿಯಲ್ಲಿದೆ? ಎಲ್ಲೂ ಕಾಣದಿರುವಾಗ ಅದನ್ನು ಯಾರು ಮತ್ತು ಹೇಗೆ ಮುದ್ರಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ತನಿಖಾ ಸಂಸ್ಥೆಗಳು ವಿರೋಧ ಪಕ್ಷಗಳ ಮೇಲೆ ಮಾತ್ರ ಗಮನಹರಿಸುತ್ತಿವೆ ಎಂದು ಹೇಳಿದರು. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಕೇವಲ ವಿರೋಧ ಪಕ್ಷಗಳನ್ನು ಬಲೆಗೆ ಬೀಳಿಸಲು ಉದ್ದೇಶಿಸಿದೆಯೇ ಎಂದು ಪ್ರಶ್ನಿಸಿದರು.
ಈ ಮಧ್ಯೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಕರ್ನಾಟಕವನ್ನು ಹಣದ ಮೂಲವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಆಡಳಿತವಿರುವ ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಿಂದ ಹಣ ಬಾರದ ಕಾರಣ ಕಾಂಗ್ರೆಸ್ ಎಲ್ಲಾ ಚುನಾವಣೆಗಳಿಗೆ ಕರ್ನಾಟಕದಿಂದ ಹಣವನ್ನು ಕಳುಹಿಸುತ್ತದೆ ಎಂದರು.
ಸಾರ್ವಜನಿಕರ ಹಣ ದುರುಪಯೋಗವಾಗುತ್ತಿದೆ. ಗೃಹ ಲಕ್ಷ್ಮಿ ಖಾತ್ರಿ ಯೋಜನೆಯಡಿ 2025ರ ಫೆಬ್ರುವರಿ ಮತ್ತು ಮಾರ್ಚ್ನ 5,000 ಕೋಟಿ ರೂ. ಪಾವತಿಯಾಗಿಲ್ಲ, ಮೊದಲು ಕೊಡಲಾಗಿದೆ ಅಂತಾ ಹೇಳಿ ನಂತರ ಕೊಟ್ಟಿಲ್ಲ ಎಂದು ಹೇಳಿದರು. ಈ ರೀತಿ ಕಾಂಗ್ರೆಸ್ ಮಾತ್ರ ಮಾಡುವುದಕ್ಕೆ ಸಾಧ್ಯ ಎಂದರು.
Advertisement