News headlines 26-01-2026 | R-Day: ಸರ್ಕಾರದ ಭಾಷಣ ಸಂಪೂರ್ಣ ಓದಿದ ರಾಜ್ಯಪಾಲರು; ಶತಾವಧಾನಿ ಗಣೇಶ್ ಸೇರಿ ರಾಜ್ಯದ 8 ಸಾಧಕರಿಗೆ ಪದ್ಮ ಪ್ರಶಸ್ತಿ

News bulletin video
ಸುದ್ದಿ ಮುಖ್ಯಾಂಶಗಳುonline desk

1. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗವರ್ನರ್ ಗೆಹ್ಲೋಟ್ ಧ್ವಜಾರೋಹಣ

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಧ್ವಜಾರೋಹಣ ನೆರವೇರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಣಿ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಕಳೆದ ವಾರ ವಿಧಾನಮಂಡಲ ಅಧಿವೇಶನದ ವೇಳೆ ಸರ್ಕಾರದ ಭಾಷಣದ ಮೊದಲ ಹಾಗೂ ಕೊನೆಯ ಸಾಲು ಓದಿ ನಿರ್ಗಮಿಸುವ ಮೂಲಕ ಗದ್ದಲಕ್ಕೆ ಕಾರಣವಾಗಿದ್ದ ರಾಜ್ಯಪಾಲರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರ ನೀಡಿದ್ದ ಭಾಷಣವನ್ನು ಸಂಪೂರ್ಣ ಓದಿದ್ದು ವಿಶೇಷವಾಗಿತ್ತು.

2. ಶತಾವಧಾನಿ ಗಣೇಶ್ ಸೇರಿ ರಾಜ್ಯದ 8 ಸಾಧಕರಿಗೆ ಪದ್ಮ ಪ್ರಶಸ್ತಿ

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ 2026 ನೇ ಸಾಲಿನ ಪದ್ಮ ಪ್ರಶಸ್ತಿ ಘೋಷಿಸಿದ್ದು, 5 ಸಾಧಕರು ಪದ್ಮವಿಭೂಷಣ, 13 ಸಾಧಕರು ಪದ್ಮಭೂಷಣ, 113 ಮಂದಿ ತಮ್ಮ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಶತಾವಧಾನಿ ಆರ್ ಗಣೇಶ್ ಸೇರಿದಂತೆ ರಾಜ್ಯದ 8 ಮಂದಿ ಸಾಧಕರು ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸಮಾಜ ಸೇವೆ ಕ್ಷೇತ್ರದಲ್ಲಿ ಎಂ. ಅಂಕೇಗೌಡ, ಎಸ್ ಜಿ ಸುಶೀಲಮ್ಮ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರಭಾಕರ ಕೋರೆ, ಶಶಿ ಶೇಖರ್ ವೆಂಪತಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸುರೇಶ್ ಹನಗವಾಡಿ, ವಿಜ್ನಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಶುಭಾ ವೆಂಕಟೇಶ್ ಅಯ್ಯಂಗಾರ್, ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಮರಣೋತ್ತರವಾಗಿ ಟಿಟಿ ಜಗನ್ನಾಥನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ ಒಲಿದಿದ್ದರೆ, ಶತಾವಧಾನಿ ಆರ್ ಗಣೇಶ್ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

3. ಶಿವಮೊಗ್ಗ-ಭದ್ರಾವತಿ ರಸ್ತೆಯಲ್ಲಿ ಭೂಕುಸಿತ: ಬದಲಿ ಸಂಚಾರ ಮಾರ್ಗ

ಶಿವಮೊಗ್ಗ ತಾಲ್ಲೂಕಿನ ನಿಡಿಗೆ ಹೋಬಳಿಯ ಮಾಚೇನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 206 ರ ಭಾಗವಾದ ಶಿವಮೊಗ್ಗ-ಭದ್ರಾವತಿ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಿ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.

ಜನವರಿ 22 ರಂದು ಕೆಎಂಎಫ್ ಡೈರಿ ಕಟ್ಟಡದ ಬಳಿಯ ಟಿಎಂಎಇಎಸ್ ಆಯುರ್ವೇದ ಕಾಲೇಜಿನ ಮುಂಭಾಗದಲ್ಲಿ ಭೂಕುಸಿತ ಸಂಭವಿಸಿದೆ. ಘಟನೆ ಸಂಭವಿಸಿದಾಗ ಆ ಭಾಗದಲ್ಲಿ ಕೆಲವು ರಸ್ತೆ ಕಾಮಗಾರಿಗಳು ನಡೆಯುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 23 ಮತ್ತು 24 ರಂದು ಸಂಬಂಧಪಟ್ಟ ಗುತ್ತಿಗೆದಾರರು ಪೀಡಿತ ಪ್ರದೇಶವನ್ನು ಪರಿಶೀಲಿಸಿದರು. ಸ್ಥಳದಲ್ಲಿನ ಸೇವಾ ರಸ್ತೆ ತೀವ್ರವಾಗಿ ಹಾನಿಗೊಳಗಾಗಿದ್ದು, ಸುರಕ್ಷತಾ ಕ್ರಮವಾಗಿ ಅಧಿಕಾರಿಗಳು ದ್ವಿಮುಖ ಸಂಚಾರ ನಿರ್ಬಂಧಿಸಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಿದ್ದಾರೆ.

4. ಡಿಜಿ ಮತ್ತು ಐಜಿಪಿ ಎಂ.ಎ ಸಲೀಂ ವಿರುದ್ಧ ಸುಳ್ಳು ಮಾಹಿತಿ; ಪುನೀತ್ ಕೆರೆಹಳ್ಳಿ ವಿರುದ್ಧ FIR 

ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿಪಿ) ಎಂ.ಎ. ಸಲೀಂ ವಿರುದ್ಧ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಗೋರಕ್ಷಕ ಮತ್ತು ಹಿಂದು ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರ ವಿರುದ್ಧ ಸೈಬರ್ ಅಪರಾಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ 10 ದಿನಗಳಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿರುವ ಮೂರನೇ ಎಫ್‌ಐಆರ್ ಇದಾಗಿದೆ. ಜನವರಿ 23 ರಂದು ಎಫ್‌ಐಆರ್ ದಾಖಲಾಗಿದ್ದು, ಎಫ್ಐಆರ್ ನಲ್ಲಿ ಪುನೀತ್ ಕೆರೆಹಳ್ಳಿ ಅವರು ನಾಲ್ಕರಿಂದ ಐದು ಸಹಚರರೊಂದಿಗೆ ಜನವರಿ 22 ರಂದು ಸಕಿನಾ ತಸ್ಲೀಂ ಅವರಿಗೆ ಸೇರಿದ ಸೋಲದೇವನಹಳ್ಳಿ ಬಳಿಯ ಕೆಂಪಾಪುರ ಶ್ವೇತಾ ಫಾರ್ಮ್ ರಸ್ತೆಯಲ್ಲಿರುವ ಪ್ರದೇಶವೊಂದಕ್ಕೆ ಹೋಗಿದ್ದು, ಅಲ್ಲಿ ಲೈವ್ ವೀಡಿಯೋ ಮಾಡಿದ್ದಾರೆ.

ವಿಡಿಯೋದಲ್ಲಿ ಅಲ್ಲಿದ್ದ ಜನರನ್ನು ಬಾಂಗ್ಲಾದೇಶದಿಂದ ಮಾನವ ಕಳ್ಳಸಾಗಣೆ ಮೂಲಕ ಇಲ್ಲಿಗೆ ಕರೆತಂದು ಆಶ್ರಯ ನೀಡಲಾಗುತ್ತಿದೆ. ಇದು ಡಿಜಿ ಮತ್ತು ಐಜಿಪಿ ಸಲೀಂ ಅವರಿಗೆ ಸೇರಿದ 'ಬೇನಾಮಿ' ಆಸ್ತಿಯಾಗಿದೆ. ಬಾಂಗ್ಲಾದೇಶಿ ಮುಸ್ಲಿಮರು ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆಂದು ಆರೋಪಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com