

ಬೆಂಗಳೂರು: ಜಯನಗರದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಆಪ್ತನಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೋಮಶೇಖರ್ ರೆಡ್ಡಿ ಚಾಕು ಇರಿತಕ್ಕೊಳಗಾದ ವ್ಯಕ್ತಿ. ಜಯನಗರದ 9th ಬ್ಲಾಕ್ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಘಟನೆ ನಡೆದಿದೆ. ಹೊಟ್ಟೆ, ಎದೆ, ಬೆನ್ನಿಗೆ ಚಾಕುವಿನಿಂದ ಇರಿಯಲಾಗಿದೆ.
ಸೋಮಶೇಖರ್ ರೆಡ್ಡಿ ವಾಟರ್ ಪ್ಲಾಂಟ್ ನಡೆಸುತ್ತಿದ್ದಾರೆ. ಯುವಕರ ಗುಂಪೊಂದು ವಾಟರ್ ಪ್ಲಾಂಟ್ ಬಳಿ ಬಂದಾಗ ಕಿರಿಕ್ ಆಗಿದೆ. ಮಾತಿಗೆ ಮಾತು ಬೆಳೆದು ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ. ಆಟೋದಲ್ಲಿ ಮಾರಕಾಸ್ತ್ರಗಳ ಸಮೇತ ಬಂದಿದ್ದ ಐವರ ಗುಂಪು ರೆಡ್ಡಿ ಮೇಲೆ ದಾಳಿ ನಡೆಸಿದೆ. ಗಾಯಾಳವನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಜೂನ್ 24ರ ಸಂಜೆ ಘಟನೆ ನಡೆದಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿ, ಬಾಲು, ಪುಲಿ, ವಿಷ್ಣು, ಶಂಕರ್ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಬಂದು ದಾಳಿ ಮಾಡಿದ್ದಾರೆಂದು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.