

ಧಾರವಾಡ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ಪಾಪಿ ಪತಿಯೊಬ್ಬ ತನ್ನ ಹೆಂಡತಿ ದಪ್ಪಗಿದ್ದಾಳೆ ಎಂದು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾಂಕಾ ಕಮಲಾಕರ್(29) ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಪತಿ ಬಸವರಾಜ್ ವಡ್ಡರ್ ನನ್ನು ಬಂಧಿಸಲಾಗಿದೆ.
2024 ರಲ್ಲಿ ಪ್ರಿಯಾಂಕಾಳನ್ನ ಮದುವೆಯಾಗಿದ್ದ ಬಸವರಾಜ್, ಮದುವೆಯಾದ ಒಂದೇ ವರ್ಷದಲ್ಲಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತಿದ್ದ ಎಂದು ಆರೋಪಿಸಲಾಗಿದೆ. ತವರು ಮನೆಯಿಂದ ಬಂಗಾರ, ಹಣ ತರುವಂತೆ ಕಿರುಕುಳ ನೀಡಿದ್ದಲ್ಲದೇ, ನೀನು ದಪ್ಪ ಇದ್ದಿ, ಗರ್ಭಿಣಿ ಆಗಲ್ಲ ಅಂತ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ನಂತರ ಕೊಲೆಯಾದ ಮಹಿಳೆಯ ಪೋಷಕರಿಗೆ ಈ ಮಾಹಿತಿ ನೀಡಲಾಗಿದೆ. ಅವರು ಕಲಬುರಗಿಯಿಂದ ಮಂಗಳವಾರ ತಡರಾತ್ರಿ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.