

ಚಿಕ್ಕಮಗಳೂರು: ಐದು ದಶಕಗಳ ಹೋರಾಟದ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ನಿಡಘಟ್ಟ ಗ್ರಾಮದ ದಲಿತ ಸಮುದಾಯದ ನೂರಾರು ಜನರು ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪ್ರವೇಶಿಸಿ, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.
ದೇವಾಲಯ ಪ್ರವೇಶದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿತ್ತು. ಆದರೆ, ಗ್ರಾಮದಲ್ಲಿನ ಇತರ ಸಮುದಾಯದವರು ಯಾವುದೇ ವಿರೋಧ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಪೂಜಾ ಕೈಂಕರ್ಯಗಳು ಶಾಂತಿಯುತವಾಗಿ ನಡೆಯಿತು.
ದೇವಾಲಯ ಪ್ರವೇಶ ಪ್ರಕ್ರಿಯೆಯನ್ನು ಕಡೂರು ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ, ತರೀಕೆರೆ ಡಿವೈಎಸ್ಪಿ ವಿ.ಎಸ್. ಹಲಮೂರ್ತಿ ರಾವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್. ಪ್ರವೀಣ್, ವೃತ್ತ ನಿರೀಕ್ಷಕ ಎಂ. ರಫೀಕ್ ಹಾಗೂ ಸಕ್ರಾಯಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪವನ್ ಮೇಲ್ವಿಚಾರಣೆ ಮಾಡಿದರು.
ಸ್ವಾತಂತ್ರ್ಯದಿಂದಲೂ ಗಾಂಧಿ ದೇವಾಲಯದಲ್ಲೇ ಪೂಜೆ
ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದಲ್ಲೇ ದಲಿತ ಸಮುದಾಯವು ಮಹಾತ್ಮ ಗಾಂಧಿ ಅವರ ದೇವಸ್ಥಾನ ನಿರ್ಮಿಸಿಕೊಂಡಿದ್ದು, ಸ್ವಾತಂತ್ರ್ಯಾನಂತರದಿಂದಲೂ ಅಲ್ಲಿಯೇ ಪೂಜೆ ಸಲ್ಲಿಸುತ್ತಿತ್ತು. ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದ್ದರಿಂದ ಇದೇ ಅವರಿಗೆ ಪೂಜಾ ಸ್ಥಳವಾಗಿತ್ತು.
ಐದು ದಶಕಗಳ ಹೋರಾಟಕ್ಕೆ ಫಲ
ಗ್ರಾಮದ ವಿದ್ಯಾವಂತ ದಲಿತ ಯುವಕರು ಹಾಗೂ ಪ್ರಗತಿಪರ ಚಳವಳಿಯ ಮುಖಂಡರು ಕಳೆದ 50 ವರ್ಷಗಳಿಂದ ದೇವಾಲಯ ಪ್ರವೇಶ ಸೇರಿದಂತೆ ಸಮಾನ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದರು.
ಈ ವಿಚಾರವನ್ನು ಹಲವು ಬಾರಿ ಕಡೂರು ತಾಲ್ಲೂಕು ಆಡಳಿತದ ಗಮನಕ್ಕೂ ತಂದಿದ್ದರೂ, ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿರಲಿಲ್ಲ.
ಆಡಳಿತ ಮತ್ತು ಪೊಲೀಸರಿಗೆ ಕೃತಜ್ಞತೆ
ಇದೀಗ ಕೊನೆಗೂ ದಲಿತರು ದೇವಾಲಯ ಪ್ರವೇಶಿಸುವಂತೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೆ ಯಶಸ್ವಿಯಾಗಿ ನಡೆದ ಬಳಿಕ, ದಲಿತ ಮುಖಂಡರಾದ ವೈ.ಟಿ. ಗೋವಿಂದಪ್ಪ, ರಾಘವೇಂದ್ರ, ಬಾಣೂರು ಸುರೇಶ್, ಕಡೂರು ಪ್ರಮೋದ್, ಬಾಣೂರು ನಾಗಣ್ಣ, ವೈ. ಮಳಾಪುರ ತಮ್ಮಯ್ಯ, ಬಸೂರು ಪ್ರಸನ್ನ, ಗೋಪಾಲ್, ಜಯಣ್ಣ ಹಾಗೂ ಕೆಡಿಗೆರೆ ಚಂದ್ರಪ್ಪ ಅವರು ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದರು.