

ಮಂಗಳೂರು: ಹಾಸನದ ಎಸ್ಡಿಎಂ ಆಯುರ್ವೇದ ಕಾಲೇಜಿನ ಮಾನಸರೋಗ ವಿಭಾಗದ ಮೂವರು ಸ್ನಾತಕೋತ್ತರ ವಿದ್ಯಾರ್ಥಿಗಳು ಆಂಧ್ರಪ್ರದೇಶದ ವಿಜಯವಾಡ ಬಳಿ ಚಲಿಸುವ ರೈಲಿನಲ್ಲಿ ತುಂಬು ಗರ್ಭಿಣಿಗೆ ತುರ್ತು ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದು ತಾಯಿ ಮತ್ತು ಹೆಣ್ಣು ಮಗು ಆರೋಗ್ಯವಾಗಿದ್ದಾರೆ.
ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ಹಾಸನದಿಂದ ವಾರಣಾಸಿಗೆ ಡಾ. ರಶ್ಮಿ ಬಿಲಗಿ, ಡಾ. ಶಾಹಿನ್ ಎಂ. ಮತ್ತು ಡಾ. ಲತಾಶ್ರೀ ಎನ್ ಎಂಬ ಪಿಜಿ ವೈದ್ಯರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಗರ್ಭಾಶಯದಲ್ಲಿನ ನೀರು ಹೊರಬರುತ್ತಿತ್ತು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗದ ಕಾರಣ ಮೂವರು ವೈದ್ಯರು ಆಕೆಗೆ ಸಹಾಯ ಮಾಡಲು ಮುಂದಾದರು. ಹೆರಿಗೆಯ ಸಮಯದಲ್ಲಿ ಮಗುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡಿರುವುದನ್ನು ವೈದ್ಯರು ಕಂಡುಕೊಂಡರು. ಹೆರಿಗೆಗೂ ಮುನ್ನ ಮಗುವಿನ ತಲೆಯ ಮೇಲಿದ್ದ ಬಳ್ಳಿಯನ್ನು ಎಚ್ಚರಿಕೆಯಿಂದ ಸಡಿಲಗೊಳಿಸಲಾಗಿತ್ತು. ನಂತರ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದರು ಎಂದು ವೈದ್ಯರು ಹೇಳಿದರು.
ರೈಲಿನಲ್ಲಿ ಲಭ್ಯವಿದ್ದ ಸೀಮಿತ ವಸ್ತುಗಳನ್ನು ಬಳಸಿ, ಶೇವಿಂಗ್ ಬ್ಲೇಡ್ ಮತ್ತು ಶುದ್ಧ ದಾರದಿಂದ ಹೊಕ್ಕುಳಬಳ್ಳಿಯನ್ನು ಬಿಗಿಗೊಳಿಸಿ ಕತ್ತರಿಸಿದರು. ಹೆಚ್ಚಿನ ವೈದ್ಯಕೀಯ ನೆರವು ಲಭ್ಯವಾಗುವವರೆಗೆ ತಾಯಿ ಮತ್ತು ಮಗುವಿನ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿದರು. ನಂತರ ತಾಯಿ ಮತ್ತು ಮಗುವನ್ನು ಆಂಬ್ಯುಲೆನ್ಸ್ ಮೂಲಕ ವಿಜಯವಾಡದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.