'ಉಪಪಂಗಡಗಳಿಂದ ಒಡೆದಿರುವ ಲಿಂಗಾಯತ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕು'; ಪ್ರತ್ಯೇಕ ಧರ್ಮ ಮಾನ್ಯತೆಗೆ ಎಂ.ಬಿ. ಪಾಟೀಲ್ ಮತ್ತೆ ಆಗ್ರಹ

ಭಾರತದಲ್ಲಿ ಜನಿಸಿದ ಜೈನ, ಸಿಖ್ ಹಾಗೂ ಬೌದ್ಧ ಧರ್ಮಗಳಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಇದೆ. ಅದೇ ರೀತಿ ಲಿಂಗಾಯತ ಧರ್ಮಕ್ಕೂ ಪ್ರತ್ಯೇಕ ಮಾನ್ಯತೆ ನೀಡಿದರೆ ಹಿಂದೂ ಧರ್ಮಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ.
MB patil
ಎಂ.ಬಿ ಪಾಟೀಲ್
Updated on

ಬೆಂಗಳೂರು: ವೀರಶೈವ-ಲಿಂಗಾಯತ ಧರ್ಮವು ಮೂಲತಃ ಜಾತಿರಹಿತ ಧರ್ಮವಾಗಿದ್ದರೂ, ಕಾಲಕ್ರಮೇಣ ಸಮಾಜವು ಉಪಪಂಗಡಗಳ ಆಧಾರದ ಮೇಲೆ ವಿಭಜನೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ವಿಭಜನೆ ಕುರಿತು ಲಿಂಗಾಯತ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಅವರು ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಆರಂಭವಾದ ಎರಡು ದಿನಗಳ 14ನೇ ಶರಣ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಧರ್ಮದ ತತ್ವಗಳು ಸಮಾಜದಲ್ಲಿ ವ್ಯಾಪಕವಾಗಿ ಹರಡದಿರುವುದಕ್ಕೆ ಆಂತರಿಕ ಭಿನ್ನಾಭಿಪ್ರಾಯಗಳೇ ಪ್ರಮುಖ ಕಾರಣವಾಗಿವೆ ಎಂದು ಅಭಿಪ್ರಾಯಪಟ್ಟರು.

"ಲಿಂಗಾಯತ ಧರ್ಮಕ್ಕೆ ಹೊರಗಿನಿಂದಷ್ಟೇ ಅಲ್ಲ, ಸಮುದಾಯದ ಒಳಗಿನಿಂದಲೂ ವಿರೋಧ ವ್ಯಕ್ತವಾಗಿದೆ. ಇದರ ಪರಿಣಾಮವಾಗಿ ಬಸವಾದಿ ಶರಣರ ತತ್ವ ಹಾಗೂ ಲಿಂಗಾಯತ ಧರ್ಮ ಕರ್ನಾಟಕದ ಗಡಿಯನ್ನು ದಾಟಿ ದೇಶದಾದ್ಯಂತ ಮತ್ತು ಜಗತ್ತಿನಾದ್ಯಂತ ಹರಡುವಷ್ಟು ಹರಡಲಿಲ್ಲ ಎಂದು ಹೇಳಿದರು.

ಇದೇ ವೇಳೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದ ಸಚಿವರು, "ಭಾರತದಲ್ಲಿ ಜನಿಸಿದ ಜೈನ, ಸಿಖ್ ಹಾಗೂ ಬೌದ್ಧ ಧರ್ಮಗಳಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಇದೆ. ಅದೇ ರೀತಿ ಲಿಂಗಾಯತ ಧರ್ಮಕ್ಕೂ ಪ್ರತ್ಯೇಕ ಮಾನ್ಯತೆ ನೀಡಿದರೆ ಹಿಂದೂ ಧರ್ಮಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ," ಎಂದು ಹೇಳಿದರು.

ಈ ಬೇಡಿಕೆಗೆ ಸಮುದಾಯದ ಕೆಲವರೇ ವಿರೋಧ ವ್ಯಕ್ತಪಡಿಸುತ್ತಿರುವುದು ಬೇಸರದ ಸಂಗತಿ ಎಂದು ಅವರು ತಿಳಿಸಿದರು.

MB patil
ಅಜ್ಜಯ್ಯನ ಅನುಯಾಯಿ ಡಿ.ಕೆ ಶಿವಕುಮಾರ್ ಲಿಂಗಾಯತ ಸಮುದಾಯಕ್ಕೆ DCM ಹುದ್ದೆ ನೀಡಲಿ: ಮಹಾಸಭಾ ಒತ್ತಾಯ; Video

ಜನಗಣತಿ ವೇಳೆ ಅನೇಕ ಲಿಂಗಾಯತರು ತಮ್ಮನ್ನು ಉಪಪಂಗಡಗಳ ಹೆಸರಿನಲ್ಲಿ ನೋಂದಾಯಿಸಿಕೊಳ್ಳುತ್ತಿರುವುದರಿಂದ ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆಯ ಪ್ರಮಾಣ ಶೇ.17-18ರಿಂದ ಸುಮಾರು ಶೇ.11ಕ್ಕೆ ಇಳಿದಿರುವಂತೆ ದಾಖಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೊ.ರು. ಚನ್ನಬಸಪ್ಪ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತ ಧರ್ಮದ ಕಾನೂನು ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ವಚನ ಸಾಹಿತ್ಯವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು. ಜೊತೆಗೆ, ಬಹುಕಾಲದಿಂದ ಬಾಕಿ ಉಳಿದಿರುವ ವಚನ ವಿಶ್ವವಿದ್ಯಾಲಯವನ್ನು ಸರ್ಕಾರವು ಇನ್ನಷ್ಟು ವಿಳಂಬ ಮಾಡದೆ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಮಾತನಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com