

ದುಧ್ಸಾಗರ್ (ಉತ್ತರ ಕನ್ನಡ): ದೂದ್ ಸಾಗರ್ ಜಲಪಾತಕ್ಕೆ ಹೋಗಲು ರೈಲು ಹಳಿಗಳ ಮೇಲೆ ಅಕ್ರಮವಾಗಿ ಸಂಚರಿಸುತ್ತಿದ್ದ 39 ಮಂದಿಯನ್ನು ಕ್ಯಾಸಲ್ರಾಕ್ನಲ್ಲಿ ವಶಕ್ಕೆ ಪಡೆದ ರೈಲ್ವೆ ಸಂರಕ್ಷಣಾ ಪಡೆ (RPF), ಪ್ರತಿಯೊಬ್ಬರಿಗೂ 500 ರೂಪಾಯಿ ದಂಡ ವಿಧಿಸಿದೆ. ಹಾಲಿನಂತಿರುವ ಬಿಳಿ ನೀರಿನ ಧುಮ್ಮಿಕ್ಕುವ ಈ ಜಲಪಾತವು ಪ್ರತಿವರ್ಷ, ವಿಶೇಷವಾಗಿ ಮಳೆಗಾಲದಲ್ಲಿ, ಸಾವಿರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.
ಆದರೆ, ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ಹಳಿಗಳ ಮೇಲೆ ನಡೆದು ದೂದ್ ಸಾಗರ್ ಗೆ ಹೋಗುವುದನ್ನು ಆರ್ ಪಿಎಫ್ ನಿಷೇಧಿಸಿದೆ. ರೈಲು ಹಳಿಗಳ ಮೇಲೆ ನಡೆಯುವುದು ಟ್ರೆಕ್ಕಿಂಗ್ಗೆ ಬರುವವರ ಜೀವಕ್ಕೆ ಅಪಾಯ ಉಂಟುಮಾಡುವುದಲ್ಲದೆ, ರೈಲು ಸಂಚಾರದ ಸುಗಮ ಕಾರ್ಯಾಚರಣೆಯನ್ನೂ ಅಡ್ಡಿಪಡಿಸುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ದೂದ್ ಸಾಗರ್ ಗೆ ಈ ಮಾರ್ಗದ ಮೂಲಕ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಕ್ಯಾಸಲ್ರಾಕ್ ಮತ್ತು ಕುಳೆಂ ರೈಲು ನಿಲ್ದಾಣಗಳ ನಡುವಿನ ಘಾಟ್ ವಿಭಾಗದಲ್ಲಿ ಆರ್ ಪಿಎಫ್ ನಿರಂತರ ಗಸ್ತು ತಿರುಗುತ್ತಿದ್ದು, ಮುನ್ನೆಚ್ಚರಿಕಾ ತಪಾಸಣೆಗಳನ್ನು ನಡೆಸುತ್ತಿದೆ.
ಕೆಲವು ಪ್ರವಾಸಿಗರು ಅರಣ್ಯ ಮಾರ್ಗದ ಮೂಲಕ ಟ್ರಕ್ಕಿಂಗ್ ಮಾಡಿ, ರೈಲು ಹಳಿ, ಸುರಂಗ ಹಾಗೂ ಸೋನಾಲಿಯಂ ಮತ್ತು ದೂದ್ ಸಾಗರ್ ರೈಲು ಯಾರ್ಡ್ಗಳ ಮೂಲಕ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ಶನಿವಾರ ನಾವು 32 ಮಂದಿಯನ್ನು ವಶಕ್ಕೆ ಪಡೆದಿದ್ದೇವೆ ಎಂದು ವಾಸ್ಕೊದಲ್ಲಿನ ಆರ್ ಪಿಎಫ್ ಮೂಲಗಳು ತಿಳಿಸಿವೆ. ಸೋಮವಾರವೂ ಇನ್ನೂ ಏಳು ಮಂದಿಯನ್ನು RPF ವಶಕ್ಕೆ ಪಡೆದು, ತಲಾ 500 ರೂಪಾಯಿ ದಂಡ ವಸೂಲಿ ಮಾಡಿದ ಬಳಿಕ ಬಿಡುಗಡೆ ಮಾಡಿತು.
ದಂಡ ಪಾವತಿಸಲು ವಿಫಲರಾದವರಿಗೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಭೂಕುಸಿತ, ಬಂಡೆಗಳು ಉರುಳುವಿಕೆ, ಮರಗಳು ಬೇರುಸಹಿತ ಉರುಳುವುದು ಹಾಗೂ ರೈಲು ಹಳಿಗಳು ಮತ್ತು ಸುರಂಗಗಳ ಮೇಲೆ ಮಣ್ಣು-ಕಲ್ಲುಗಳು ಬೀಳುವ ಅಪಾಯ ಹೆಚ್ಚಿರುವುದರಿಂದ ವಿಶೇಷ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು RPF ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿರಿಯ ವಿಭಾಗೀಯ ಭದ್ರತಾ ಆಯುಕ್ತರ ಮೇಲ್ವಿಚಾರಣೆಯಲ್ಲಿ ದೂದ್ ಸಾಗರ್ ಜಲಪಾತಕ್ಕೆ ತೆರಳುವ ಟ್ರಕ್ಕರ್ಗಳನ್ನು ತಡೆಯಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಯಾಸಲ್ರಾಕ್ನ ಆರ್ ಪಿಎಫ್ ಉಪನಿರೀಕ್ಷಕರ ನೇತೃತ್ವದ ತಂಡವು ದೂದ್ ಸಾಗರ್ ಮತ್ತು ಸೋನಾಲಿಯಂ ರೈಲು ನಿಲ್ದಾಣಗಳಲ್ಲಿ ದಿಢೀರ್ ತಪಾಸಣೆ ನಡೆಸಿ, ರೈಲ್ವೆ ಕಾಯ್ದೆಯ ಸೆಕ್ಷನ್ 147 (ಜನ ವಿಶ್ವಾಸ ಕಾಯ್ದೆ) ಅಡಿಯಲ್ಲಿ 32 ಪ್ರವಾಸಿಗರನ್ನು ವಶಕ್ಕೆ ಪಡೆದು, ಅವರಿಂದ ಒಟ್ಟು 16 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದೆ.