ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ: ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರ ಬಿಗ್ ರಿಲೀಫ್; vending panel ರಚನೆ, ID cards ನೀಡಲು ಆದೇಶ

ಈ ಕಾರ್ಯಾಚರಣೆ ಬೀದಿ ವ್ಯಾಪಾರಿಗಳ ವಿರುದ್ಧ ಅಲ್ಲ. ಪಾದಚಾರಿಗಳಿಗೆ ಸುರಕ್ಷಿತವಾಗಿ ಸಂಚರಿಸಲು ಪಾದಚಾರಿ ಮಾರ್ಗಗಳನ್ನು ಮುಕ್ತಗೊಳಿಸುವುದೇ ಇದರ ಉದ್ದೇಶ.
GBA workers clear footpath encroachments by shop owners at KR Market on Wednesday.
ಪಾದಚಾರಿ ಮಾರ್ಗ ತೆರವುಗೊಳಿಸುತ್ತಿರುವುದು.
Updated on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಬೀದಿ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ (ಐಡಿ ಕಾರ್ಡ್) ವಿತರಿಸುವ ಉದ್ದೇಶದಿಂದ ತಾತ್ಕಾಲಿಕ ಟೌನ್ ವೆಂಡಿಂಗ್ ಸಮಿತಿ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಶೀಘ್ರದಲ್ಲೇ ಪೂರ್ಣ ಪ್ರಮಾಣದ ಟೌನ್ ವೆಂಡಿಂಗ್ ಸಮಿತಿಯನ್ನೂ ರಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಗುರುವಾರ ವಿವಿಧ ಬೀದಿ ವ್ಯಾಪಾರಿಗಳ ಸಂಘಟನೆಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಕಾರ್ಯಾಚರಣೆ ಬೀದಿ ವ್ಯಾಪಾರಿಗಳ ವಿರುದ್ಧ ಅಲ್ಲ. ಪಾದಚಾರಿಗಳಿಗೆ ಸುರಕ್ಷಿತವಾಗಿ ಸಂಚರಿಸಲು ಪಾದಚಾರಿ ಮಾರ್ಗಗಳನ್ನು ಮುಕ್ತಗೊಳಿಸುವುದೇ ಇದರ ಉದ್ದೇಶ" ಎಂದು ಸ್ಪಷ್ಟಪಡಿಸಿದರು.

ಕಳೆದ ಮೂರು ವರ್ಷಗಳಲ್ಲಿ ಪಾದಚಾರಿ ಮಾರ್ಗಗಳ ಅತಿಕ್ರಮಣದಿಂದಾಗಿ 931 ಪಾದಚಾರಿಗಳು ಮೃತಪಟ್ಟಿದ್ದು, 3,800 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 3,500ಕ್ಕೂ ಹೆಚ್ಚು ಮಂದಿ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ ತೆರವಿಗೆ ಆದೇಶ ನೀಡಿದೆ. ಸುರಕ್ಷಿತ ಪಾದಚಾರಿ ಮಾರ್ಗದಲ್ಲಿ ಸಂಚರಿಸುವುದು ಸಂವಿಧಾನಬದ್ಧ ಹಕ್ಕು.

ಈ ಕಾರ್ಯಾಚರಣೆ ಕುರಿತು ಹಲವರು ಟೀಕೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ, ನಿಂದಿಸುತ್ತಿದ್ದಾರೆ. "ನಾನು ಕೆಟ್ಟವನಾದರೂ ಪರವಾಗಿಲ್ಲ, ಅದರಿಂದ ಬೆಂಗಳೂರಿಗೆ ಒಳ್ಳೆಯದಾದರೆ ಸಾಕು" ಎಂದು ಪ್ರತಿಕ್ರಿಯಿಸಿದರು.

GBA workers clear footpath encroachments by shop owners at KR Market on Wednesday.
ಪಾದಚಾರಿ ಮಾರ್ಗ ತೆರವು: 'ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ'- CM ಡಿ.ಕೆ ಶಿವಕುಮಾರ್; Video

ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ಮುಂದುವರಿಯಲಿದ್ದು, ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ಅತಿಕ್ರಮಣ ಮುಕ್ತಗೊಳಿಸುವವರೆಗೆ ನಿಲ್ಲಿಸುವುದಿಲ್ಲ. ಜುಲೈ 1ರಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಇದುವರೆಗೆ 430 ಕಿಲೋಮೀಟರ್‌ಗೂ ಹೆಚ್ಚು ರಸ್ತೆ ವ್ಯಾಪ್ತಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಅವಧಿಯಲ್ಲಿ 1,581 ಅನಧಿಕೃತ ಅಂಗಡಿಗಳು, 1,800 ರ್ಯಾಂಪ್‌ಗಳು, 1,790 ಶಾಶ್ವತ ನಿರ್ಮಾಣಗಳು ಹಾಗೂ ಅಂಗಡಿಗಳ ಮುಂದಿದ್ದ ಶೆಡ್‌ಗಳನ್ನು ತೆರವುಗೊಳಿಸಲಾಗಿದೆ. ಜೊತೆಗೆ, ಸುಮಾರು 2,000 ಫ್ಲೆಕ್ಸ್ ಹಾಗೂ ನಾಮಫಲಕಗಳನ್ನೂ ಪಾದಚಾರಿ ಮಾರ್ಗಗಳಿಂದ ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ ಒಟ್ಟು ಸುಮಾರು 18,000 ಕಿ.ಮೀ. ರಸ್ತೆ ಜಾಲ ಇದ್ದು, ಅದರಲ್ಲಿ 1,500 ರಿಂದ 2,000 ಕಿ.ಮೀ. ಮಾತ್ರ ಪ್ರಮುಖ ರಸ್ತೆಗಳಾಗಿವೆ. ಈ ಪ್ರಮುಖ ರಸ್ತೆಗಳಲ್ಲಿ ಮಾತ್ರ ಅತಿಕ್ರಮಣ ಮಾಡದಂತೆ ಬೀದಿ ವ್ಯಾಪಾರಿಗಳಿಗೆ ಮನವಿ ಮಾಡಿದ ಅವರು, ಉಳಿದ ಒಳರಸ್ತೆಗಳಲ್ಲಿ ವ್ಯಾಪಾರ ನಡೆಸುವ ಬಗ್ಗೆ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಾಗುವುದು ಎಂದರು.

ಇನ್ನೊಂದೆಡೆ, ಸಚಿವರನ್ನು ಭೇಟಿಯಾದ ಜಂಟಿ ಬೀದಿ ವ್ಯಾಪಾರಿಗಳ ಒಕ್ಕೂಟ ಸರ್ಕಾರದ ನಿರ್ಧಾರದಿಂದ ನಿರಾಶೆ ವ್ಯಕ್ತಪಡಿಸಿದೆ. ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ಮುಂದುವರಿಸುವ ನಿರ್ಧಾರದಿಂದ ಹಿಂದೆ ಸರಿಯದ ಸಚಿವರ ನಿಲುವಿಗೆ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.

ಪಾದಚಾರಿ ಮಾರ್ಗಗಳ ಮೇಲಿನ ವ್ಯಾಪಾರವೇ ಅಪಘಾತಗಳಿಗೆ ಕಾರಣ ಎಂಬ ಸಚಿವರ ಹೇಳಿಕೆಯನ್ನು ಒಕ್ಕೂಟ ತಳ್ಳಿಹಾಕಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದೇ ಹೆಚ್ಚಿನ ಅಪಘಾತಗಳಿಗೆ ಕಾರಣ ಎಂದು ಪ್ರತಿಪಾದಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com