'ನನ್ನ ಮಗ ದೇವರಿಗೆ ಪೂಜೆ ಮಾಡದೆ ನೀರು ಸಹ ಕುಡಿಯೋದಿಲ್ಲ; ಇಂತಹ ನಂಬಿಕೆ ಹುಟ್ಟುಹಾಕಿದ್ದು ಮನುವಾದಿಗಳು' : ಮಾಜಿ CM ಸಿದ್ದರಾಮಯ್ಯ

ಇಂದು ನೆಹರು ಮತ್ತು ನರೇಂದ್ರ ಮೋದಿಯನ್ನು ಹೋಲಿಕೆ ಮಾಡುವ ಕೆಲಸ ಆಗುತ್ತಿದೆ. ನೆಹರೂ ಮತ್ತು ಮೋದಿಯವರನ್ನು ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲ. ನೆಹರು ಎಲ್ಲಿ ಮೋದಿ ಎಲ್ಲಿ? ಈ ಸುಳ್ಳನ್ನು ಜನರಿಗೆ ಹೇಳಿದಾಗ ಅದನ್ನು ನಂಬುವಂತವರು ಇದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
Ex CM Siddaramaiah in retired judge H N Nagamohan Das book release function
ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರ "ಮೆಮೋರೆಬಲ್ ಟ್ರಯಲ್ಸ್ - ಅವಿಸ್ಮರಣೀಯ ಪ್ರಕರಣಗಳು" ಕೃತಿಯ ಕನ್ನಡ ಹಾಗೂ ಇಂಗ್ಲೀಷ್ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ
Updated on

ಬೆಂಗಳೂರು: "ನನ್ನ ಮಗ, ಸಚಿವ ಡಾ. ಯತೀಂದ್ರ ಅವರು ಪೂಜೆ ಮಾಡದೆ ಆಹಾರ ಮುಟ್ಟುವುದಿಲ್ಲ, ನೀರನ್ನೂ ಕುಡಿಯುವುದಿಲ್ಲ. ಇಂತಹ ನಂಬಿಕೆಗಳನ್ನು ಹುಟ್ಟುಹಾಕಿರುವುದು ಮನುವಾದಿಗಳು," ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಅವರ 'ಮೆಮೊರಬಲ್ ಟ್ರಯಲ್ಸ್' (Memorable Trials) ಪುಸ್ತಕವನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, "ವೈದ್ಯರು, ಎಂಜಿನಿಯರ್‌ಗಳು, ಪ್ರಾಧ್ಯಾಪಕರು, ವಿಜ್ಞಾನಿಗಳು, ತಂತ್ರಜ್ಞರು ಕೂಡ ಮೂಢನಂಬಿಕೆಗಳನ್ನು ಅನುಸರಿಸುತ್ತಿದ್ದಾರೆ. ನನ್ನ ಮಗ (ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ) ವೈದ್ಯರಾಗಿದ್ದರೂ ಪ್ರತಿದಿನ ಪೂಜೆ ಮಾಡುತ್ತಾರೆ. ನಾನು ಮಾಡುವುದಿಲ್ಲ. ಏನು ಮಾಡುವುದು? ಅವರು ಪೂಜೆ ಮಾಡದೆ ಊಟ ಮಾಡುವುದಿಲ್ಲ, ನೀರು ಕುಡಿಯುವುದಿಲ್ಲ. ಅದು ಅವರ ನಂಬಿಕೆ. ಆದರೆ ಇಂತಹ ನಂಬಿಕೆಗಳನ್ನು ಸೃಷ್ಟಿಸಿದ್ದು ಮನುವಾದಿಗಳು ಎಂದರು.

Ex CM Siddaramaiah in retired judge H N Nagamohan Das book release function
ಸಿದ್ದರಾಮಯ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ 2028ರ ಚುನಾವಣೆಯಲ್ಲಿ ಗೆಲುವು: ನನಗೆ ಸಚಿವ ಸ್ಥಾನ ಬೇಡ; KN ರಾಜಣ್ಣ

ವೈಚಾರಿಕತೆಯನ್ನು ಪ್ರತಿಪಾದಿಸುವ ಹಾಗೂ ದೇವರ ಅಸ್ತಿತ್ವದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ರಾಜಕೀಯೇತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೂಢನಂಬಿಕೆಗಳ ವಿರುದ್ಧ ಸದಾ ಧ್ವನಿಯೆತ್ತಿರುವ ಸಿದ್ದರಾಮಯ್ಯ ಅವರ ಮೊದಲ ಮುಖ್ಯಮಂತ್ರಿ ಅವಧಿಯಲ್ಲಿ 'ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿ ಮತ್ತು ಮಾಟ-ಮಂತ್ರ ನಿಷೇಧ ಕಾಯ್ದೆ-2017' ಕರಡು ರೂಪುಗೊಂಡಿತ್ತು.

ನೆಹರೂ–ಮೋದಿ ಹೋಲಿಕೆ ಸರಿಯಲ್ಲ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರೊಂದಿಗೆ ಹೋಲಿಸುವ ಪ್ರವೃತ್ತಿಯನ್ನು ಟೀಕಿಸಿದ ಸಿದ್ದರಾಮಯ್ಯ, "ನೆಹರೂ ಮತ್ತು ಮೋದಿ ಅವರನ್ನು ಹೇಗೆ ಹೋಲಿಸಬಹುದು? ಇಬ್ಬರೂ ಹೋಲಿಕೆಗೆ ಮೀರಿದವರು. ನೆಹರೂ 17 ವರ್ಷ ಪ್ರಧಾನಿಯಾಗಿದ್ದರು. ಮೋದಿ 12 ವರ್ಷ ಪೂರ್ಣಗೊಳಿಸಿದ್ದಾರೆ. ಮೋದಿ ನೆಹರೂ ದಾಖಲೆ ಮುರಿದಿದ್ದಾರೆ ಎಂದು ಹೇಳುತ್ತಾರೆ. ಇಂತಹ ವಿಷಯಗಳ ಬಗ್ಗೆ ಚರ್ಚೆಯಾಗದಿದ್ದರೆ ಸತ್ಯ ಹೇಗೆ ಹೊರಬರುತ್ತದೆ?" ಎಂದು ಪ್ರಶ್ನಿಸಿದರು.

ಸಂವಿಧಾನ ಜಾರಿಯಾಗಿ 76 ವರ್ಷಗಳಾದರೂ ಅದರ ಆದರ್ಶಗಳು ಸಂಪೂರ್ಣವಾಗಿ ಸಾಕಾರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, "ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕೆಲವು ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದರು. ಶಿಕ್ಷಣದ ಹಕ್ಕು, ಆಹಾರದ ಹಕ್ಕು, ಮಾಹಿತಿ ಹಕ್ಕು ಮತ್ತು ಉದ್ಯೋಗದ ಹಕ್ಕುಗಳನ್ನು ಜಾರಿಗೆ ತಂದರು. ಇವೆಲ್ಲವೂ ಸಂವಿಧಾನದಲ್ಲಿದ್ದರೂ, ಅದಕ್ಕೂ ಮೊದಲು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಲಿಲ್ಲ ಎಂದರು.

ಈ ಪುಸ್ತಕದಲ್ಲಿ ಗ್ರೀಕ್ ತತ್ವಜ್ಞಾನಿ ಸಾಕ್ರಟೀಸ್, ಯೇಸು ಕ್ರಿಸ್ತ, ಮಹಾತ್ಮ ಗಾಂಧಿ, ಶಹೀದ್-ಎ-ಆಜಂ ಭಗತ್ ಸಿಂಗ್, ನೆಲ್ಸನ್ ಮಂಡೇಲಾ ಸೇರಿದಂತೆ ಜಗತ್ತಿನ 21 ಐತಿಹಾಸಿಕ ವಿಚಾರಣೆಗಳ ಕುರಿತು ವಿವರಿಸಲಾಗಿದೆ.

'ಮಾರಾಟವಾದವರು ಮಾಧ್ಯಮದಲ್ಲಿ ಮಾತ್ರವಲ್ಲ'

ಕಾರ್ಯಕ್ರಮದಲ್ಲಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರಾಜ್, ನ್ಯಾಯ ವ್ಯವಸ್ಥೆ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಸಾಧನವಾಗಿರುವುದರ ಜೊತೆಗೆ, ಕೆಲವೊಮ್ಮೆ ನಿರಪರಾಧಿಗಳಿಗೂ ಅನ್ಯಾಯವಾಗುವ ಸಾಧನವಾಗಿಯೂ ಬಳಕೆಯಾಗಿದೆ ಎಂದು ಹೇಳಿದರು.

"ಕಾನೂನುಬದ್ಧವಾಗಿ ಸರಿಯಾಗಿರುವ ಅನೇಕ ವಿಷಯಗಳು ನೈತಿಕವಾಗಿ ಸರಿಯಾಗಿರಬೇಕೆಂದಿಲ್ಲ," ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚೆಗೆ ತಾವು ಮಾಡಿದ್ದ 'ಸೋಲ್ಡ್ ಔಟ್ ಮೀಡಿಯಾ' ಹೇಳಿಕೆ ವಿವಾದಕ್ಕೆ ಕಾರಣವಾದ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, "ಸೋಲ್ಡ್ ಔಟ್ ಮೀಡಿಯಾ ಕೂಡ ಪತ್ರಿಕಾಗೋಷ್ಠಿಗೆ ಬರಬಹುದು ಎಂದು ನಾನು ಹೇಳಿದ್ದು ನನ್ನ ನೋವಿನಿಂದ. ಮಾಧ್ಯಮ ಮಾತ್ರವಲ್ಲ, ವಕೀಲರು, ಕಲಾವಿದರು, ಕೈಗಾರಿಕೋದ್ಯಮಿಗಳು, ನ್ಯಾಯಾಧೀಶರು ಸೇರಿದಂತೆ ಹಲವು ಕ್ಷೇತ್ರಗಳವರು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಈ ರೋಗದ ಬಗ್ಗೆ ನಾವು ಚಿಂತಿಸಬಾರದೇ?" ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com