

ಬೆಂಗಳೂರು: ಬಿಡದಿ ಟೌನ್ಶಿಪ್ ಹೋರಾಟಗಾರರ ಮೇಲೆ ಸರ್ಕಾರ ಹಾಕಿರೋ FIR ಕೂಡಲೇ ರದ್ದು ಮಾಡಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬಿಡದಿ ಟೌನ್ಶಿಪ್ ನೆಪದಲ್ಲಿ ಅಮಾಯಕ ರೈತರ ಮೇಲೆ ಎಫ್ ಐ ಆರ್ ದಾಖಲಿಸಿರುವ ಕಾಂಗ್ರೆಸ್ ಸರ್ಕಾರದ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಯಾವುದೇ ಮಾಹಿತಿ ಇಲ್ಲದೆ ರೈತರ ಭೂಮಿಗೆ ನುಗ್ಗಿ ಜಂಟಿ ಮಾಪನ ಮಾಡಲು ಮುಂದಾಗಿದ್ದರು. ಅದನ್ನು ಪ್ರಶ್ನಿಸಿದ ರೈತರ ಹೋರಾಟವನ್ನು ಹತ್ತಿಕ್ಕಲು ಈ ಜನವಿರೋಧಿ ಸರ್ಕಾರ FIR ಅಸ್ತ್ರ ಬಳಸಿ ಬೆದರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಈ ದಬ್ಬಾಳಿಕೆಗೆ ನಮ್ಮ ರೈತ ಬಂಧುಗಳು ಹೆದರುವ ಅಗತ್ಯವಿಲ್ಲ. ನಿಮ್ಮ ನ್ಯಾಯಯುತ ಹೋರಾಟಕ್ಕೆ ಅಗತ್ಯವಿರುವ ಸಂಪೂರ್ಣ ಕಾನೂನು ನೆರವು ಹಾಗೂ ಬೆಂಬಲ ನೀಡಲು ನಾವೆಲ್ಲರೂ ನಿಮ್ಮೊಂದಿಗೆ ಸದಾ ಸಿದ್ಧರಿದ್ದೇವೆ.
ಇನ್ನು 48 ಗಂಟೆಗಳ ಒಳಗೆ ರೈತರ ಮೇಲಿನ ಸುಳ್ಳು FIR ರದ್ದುಗೊಳಿಸಿ, ವಶಕ್ಕೆ ಪಡೆದಿರುವ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಈ ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ರಾಹುಲ್ ಗಾಂಧಿ ಅಂಡಮಾನ್- ನಿಕೋಬಾರ್ ಗೆ ಭೇಟಿ ನೀಡುವ ಬದಲು ಬಿಡದಿಗೆ ಬರಲಿ, ನಮ್ಮ ರೈತರು ತೆಂಗು, ಭತ್ತ, ರೇಷ್ಮೆ ಬೆಳೆದು ಬದುಕು ಕಟ್ಟಿಕೊಂಡಿರುವುದನ್ನು ನೋಡಲಿ ಎಂದರು. 136 ಸೀಟು ಗೆಲ್ಲಿಸಿ ನಮ್ಮ ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ, ಒಂದು ವೇಳೆ ರಾಹುಲ್ ಗಾಂಧಿ ಬಿಡದಿಗೆ ಭೇಟಿ ನೀಡಿದರೆ ಮತ್ತಷ್ಟು ಸೀಟುಗಳನ್ನು ಗೆಲ್ಲಲು ಸಾಧ್ಯವಾಗಬಹುದು ಎಂದು ಲೇವಡಿ ಮಾಡಿದ್ದಾರೆ.