

ಮೈಸೂರು: ಇತ್ತೀಚೆಗೆ ಇಹಲೋಕ ತ್ಯಜಿಸಿದ ಖ್ಯಾತ ಗಾಯಕಿ ಗಾನಕೋಗಿಲೆ ಎಸ್ ಜಾನಕಿ ಅವರ ಸಾವಿನ ಬೆನ್ನಲ್ಲೇ ಅವರ ಆಸ್ತಿ ಹಂಚಿಕೆ ವಿಚಾರವಾಗಿ ವ್ಯಾಪಕ ಸುದ್ದಿಗಳು ಹರಿದಾಡುತ್ತಿವೆ.
ಹೌದು.. ಇತ್ತೀಚೆಗೆ ಗಾಯಕಿ ಎಸ್ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದಾಗಿ ನಿಧನರಾಗಿದ್ದರು. ಆರು ದಶಕಗಳ ಕಾಲ ಸಂಗೀತ ಲೋಕವನ್ನಾಳಿದ ಅವರ ಸಾವು ಇಡೀ ದೇಶಾದ್ಯಂತ ಇರುವ ಅಭಿಮಾನಿಗಳ ಕಣ್ಣಾಲಿ ತೇವಗೊಳ್ಳುವಂತೆ ಮಾಡಿತ್ತು.
ಭಾರತೀಯ ಚಿತ್ರರಂಗದಲ್ಲಿ ಎಸ್. ಜಾನಕಿ ತಮ್ಮ ಅದ್ಭುತ ಧ್ವನಿಯಿಂದ ತಲೆಮಾರುಗಳ ಮನಗೆದ್ದ ಗಾಯಕಿ. ಐದು ದಶಕಗಳ ತಮ್ಮ ಸಂಗೀತ ಪಯಣದಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. 'ದಕ್ಷಿಣ ಭಾರತದ ಗಾನ ಕೋಗಿಲೆ' ಎಂದೇ ಅವರು ಖ್ಯಾತಿ ಪಡೆದಿದ್ದರು. ತಮ್ಮ ಆರು ದಶಕಗಳ ವೃತ್ತಿಜೀವನದಲ್ಲಿ ಸುಮಾರು 17 ಭಾಷೆಗಳಲ್ಲಿ 50,000ಕ್ಕೂ ಹೆಚ್ಚು ಗೀತೆಗಳಿಗೆ ಅವರು ಧ್ವನಿಯಾಗಿದ್ದಾರೆ.
ಅವರ ಕಂಠದಿಂದ ಮೂಡಿದ ಹಾಡುಗಳು ಎಷ್ಟೋ ಸೂಪರ್ ಹಿಟ್ ಚಿತ್ರಗಳಿಗೆ ಜೀವ ತುಂಬಿವೆ. ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂತಹ ಮಹಾನ್ ಗಾಯಕಿಯ ಆಸ್ತಿ ಮೌಲ್ಯದ ಬಗ್ಗೆ ಅಭಿಮಾನಿಗಳಲ್ಲಿ ಸದಾ ಕುತೂಹಲ ಇದ್ದೇ ಇರುತ್ತದೆ. ಒಂದು ಕಾಲದಲ್ಲಿ ಎಸ್. ಜಾನಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕಿಯಾಗಿದ್ದರು. ಆ ಕಾಲದಲ್ಲೇ ಅವರು ಲಕ್ಷಗಳಲ್ಲಿ ಸಂಭಾವನೆ ಪಡೆಯುತ್ತಿದ್ದರು.
ಇಂತಹ ಜಾನಕಿ ಅವರು ನೂರಾರು ಕೋಟಿ ಆಸ್ತಿ ಮಾಡಿದ್ದು, ಈ ಆಸ್ತಿಯನ್ನು ತಮ್ಮ ಸಾಕು ಮಗ ನವೀನ್ ಗೆ ವಿಲ್ ಬರೆದಿದ್ದಾರೆ ಎಂದು ಸುದ್ದಿಯಾಗುತ್ತಿದೆ.
ಸ್ಪಷ್ಟನೆ ಕೊಟ್ಟ ನವೀನ್
ಇನ್ನು ಈ ಎಲ್ಲ ಊಹಾಪೋಹಗಳಿಗೆ ಜಾನಕಿ ಅವರನ್ನು ನೋಡಿಕೊಳ್ಳುತ್ತಿದ್ದ ನವೀನ್ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ನೋವುಂಟು ಮಾಡಿದೆ ಎಂದು ಎಂದಿದ್ದಾರೆ.
ಇದೇ ವೇಳೆ ತಮ್ಮ ಕುರಿತು ಹರಿದಾಡುತ್ತಿರುವ ಸುದ್ದಿಗಳನ್ನು ಅಲ್ಲಗಳೆದಿರುವ ನವೀನ್ ಮತ್ತು ಪವನ್ ಅವರು, 'ಎಚ್.ಡಿ. ಕೋಟೆ ತಾಲ್ಲೂಕು ಕನಿಯನಹುಂಡಿ ಬಳಿ ಇರುವ ಜಮೀನನ್ನು ನಾನು ಮತ್ತು ನನ್ನ ಗೆಳೆಯ ಪವನ್ ಜಂಟಿಯಾಗಿ ಖರೀದಿಸಿದ್ದೇವೆ.
ಎಸ್. ಜಾನಕಿ ಅವರು ನಮ್ಮ ಹೆಸರಿನಲ್ಲಿ ಆಸ್ತಿ ಖರೀಸಿರುವ ಅಥವಾ ತಮ್ಮ ಆಸ್ತಿಯನ್ನು ನಮ್ಮ ಹೆಸರಿಗೆ ಬರೆದಿರುವ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡಬಾರದು. ಸಂಗೀತ ಲೋಕದ ಅಂತಹ ಲೆಜೆಂಡ್ ನಮಗೋಸ್ಕರ ಮೈಸೂರಿಗೆ ಬಂದು ನೆಲಸಿದ್ದು ನಮ್ಮ ಪುಣ್ಯ' ಎಂದು ಹೇಳಿದ್ದಾರೆ.
ವಿಲ್ ಮಾಡ್ತೀನಿ ಅಂತ ಹೇಳಿದ್ರು.. ಆದ್ರೆ
ಇದೇ ವಿಚಾರವಾಗಿ ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಪವನ್ ಮತ್ತು ನವೀನ್, ಅಮ್ಮ ತಮ್ಮ ಕಡೇಗಾಲದಲ್ಲಿ ತಮ್ಮ ಸಾವಿನ ನಂತರ ನಡೆಯುವ ವಿಧಿವಿಧಾನಗಳ ಕುರಿತು ನಿರ್ಣಯಕೈಗೊಳ್ಳಲು ನಮಗೆ ಅಧಿಕಾರ ನೀಡುವ ಕುರಿತು ಬರೆಯುತ್ತೇನೆ ಎಂದು ಹೇಳಿದ್ದರೇ ಹೊರತು ಆಸ್ತಿ ವಿಚಾರವಾಗಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾವು ಕಷ್ಟ ಪಟ್ಟು ಸಂಪಾದಿಸಿದ ಹಣದಲ್ಲಿ ಖರೀಸಿದ ಜಾಗದಲ್ಲೇ ಅಮ್ಮನ ಅಂತಿಮ ಸಂಸ್ಕಾರ ನಡೆದಿದ್ದು ನಮ್ಮ ಪುಣ್ಯ. ಅವರಿಗಾಗಿಯೇ ನಾನು ಮತ್ತು ನವೀನ್ ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಜಮೀನು ಖರೀದಿಸಿದ್ದೇವೆ. ಅದೇ ಜಾಗದಲ್ಲಿ ಅವರ ಅಂತ್ಯಸಂಸ್ಕಾರ ನಡೆದದ್ದು ನಮಗೆ ತೃಪ್ತಿ ತಂದಿದೆ. ಎಸ್. ಜಾನಕಿ ಅವರ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳು ನಡೆಯುವ ತಾಣವಾಗಬೇಕು ಎಂಬುದು ನಮ್ಮ ಬಯಕೆ ಎಂದು ನವೀನ್ ಹೇಳಿದ್ದಾರೆ.
ಸ್ಮಾರಕ ನಿರ್ಮಾಣ
ಸಂಗೀತ ನಿರ್ದೇಶಕ ಹಂಸಲೇಖ ಅವರ ಸಲಹೆಯಂತೆ ಇಲ್ಲಿ ಜಾನಕಿ ಅಮ್ಮನವರ ಸ್ಮಾರಕ ನಿರ್ಮಿಸುತ್ತೇವೆ. ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮತ್ತು ಸಂಗೀತ ಕಾರ್ಯಕ್ರಮಗಳ ಆಯೋಜನೆ ಕುರಿತು ಎಸ್. ಜಾನಕಿ ಅವರ ಕುಟುಂಬ ಸದಸ್ಯರ ಜತೆ ಚರ್ಚೆ ನಡೆಸುತ್ತೇವೆ. ಸರ್ಕಾರಕ್ಕೂ ಮನವಿ ಸಲ್ಲಿಸಲಿದ್ದೇವೆ. ಆಗದಿದ್ದರೆ ಅವರ ಅಭಿಮಾನಿಗಳೇ ಮುಂದಡಿ ಇಡುತ್ತೇವೆ’ ಎಂದು ನವೀನ್ ಮತ್ತು ಅವರ ಗೆಳೆಯರು ತಿಳಿಸಿದರು.