

ಬೆಂಗಳೂರು: ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯಕ್ಕಾಗಿ ಎನ್ಜಿವಿ (NGV) ಒಳಾಂಗಣ ಕ್ರೀಡಾಂಗಣದಲ್ಲಿ (ನ್ಯಾಷನಲ್ ಗೇಮ್ಸ್ ವಿಲೇಜ್, ಕೋರಮಂಗಲ) ಆಯೋಜಿಸಲಾಗಿದ್ದ ಸಾರ್ವಜನಿಕ ವೀಕ್ಷಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಿದ್ದರು.
ಫುಟ್ಬಾಲ್ ಅಭಿಮಾನಿಗಳೊಂದಿಗೆ ಪಂದ್ಯವನ್ನು ವೀಕ್ಷಿಸಲು ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಕ್ರೀಡೆಯು ತಂಡದ ಮನೋಭಾವವನ್ನು ಬೆಳೆಸಲು ಸಹಾಯ ಮಾಡುತ್ತದೆ. ತಾವು 'ಟೀಂ ಕರ್ನಾಟಕ'ವನ್ನು (ಕರ್ನಾಟಕ ತಂಡ) ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
'ಕ್ರೀಡೆಯತ್ತ ಆಕರ್ಷಿತರಾದಾಗ, ಸಹಜವಾಗಿಯೇ ಕ್ರೀಡಾ ಮನೋಭಾವ ಮೂಡುತ್ತದೆ. ನಾನು ಕೂಡ 'ಟೀಂ ಕರ್ನಾಟಕ'ವನ್ನು ಕಟ್ಟುತ್ತಿದ್ದೇನೆ. ಇದರಲ್ಲಿ ನನ್ನ ಅಧಿಕಾರಿಗಳು, ಕಾರ್ಯಕರ್ತರು, ಸಚಿವರು ಮತ್ತು ನನ್ನ ಎಲ್ಲ ಸಹೋದ್ಯೋಗಿಗಳು ಸೇರಿದ್ದಾರೆ...' ಎಂದು ಮುಖ್ಯಮಂತ್ರಿ ಹೇಳಿದರು.
ಮೆಟ್ಲೈಫ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಗೆಲುವು ಸಾಧಿಸಿದ ಸ್ಪೇನ್ ತಂಡವು ಎರಡನೇ ಬಾರಿ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಇಡೀ ಟೂರ್ನಿಯಲ್ಲಿ ಉತ್ತಮ ಆಟವಾಡಿದ ಸ್ಪೇನ್ ತಂಡವು, ಫೈನಲ್ನಲ್ಲಿ ಕೂಡ 1-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕೇರಿದೆ. ಪೈನಲ್ ಗೆಲ್ಲುವ ಮೂಲಕ 38 ಪಂದ್ಯಗಳ ಅಜೇಯ ಓಟವನ್ನು ಮುಂದುವರಿಸಿದ್ದು, ಪುರುಷರ ಮತ್ತು ಮಹಿಳೆಯರ ವಿಶ್ವಕಪ್ ಟ್ರೋಫಿಯನ್ನು ಸ್ಪೇನ್ ತನ್ನ ಬಳಿ ಇಟ್ಟುಕೊಂಡಿದೆ.
ಇದಕ್ಕೂ ಮೊದಲು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 39 ವರ್ಷ ಮತ್ತು 25 ದಿನಗಳ ವಯಸ್ಸಿನಲ್ಲಿ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಆಡಿದ ಅತ್ಯಂತ ಹಿರಿಯ 'ಔಟ್ಫೀಲ್ಡ್' (ಗೋಲ್ಕೀಪರ್ ಅಲ್ಲದ) ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಮತ್ತು ತಮ್ಮ ಅದ್ಭುತ ಸಾಧನೆಗಳ ಪಟ್ಟಿಗೆ ಮತ್ತೊಂದು ದಾಖಲೆಯನ್ನು ಸೇರಿಸಿದರು.