RSS ಸಂಪರ್ಕಿತ ಸಂಸ್ಥೆಗಳಿಗೆ ಒಎನ್‌ಜಿಸಿ CSR ನಿಧಿ: ಬಿ.ಕೆ ಹರಿಪ್ರಸಾದ್ ಆರೋಪ

ಕಳೆದ ಒಂದು ದಶಕದಲ್ಲಿ ಒಎನ್‌ಜಿಸಿಯ 668 ಕೋಟಿ ರೂಪಾಯಿ ಸಿಎಸ್‌ಆರ್‌ ನಿಧಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ 20 ಸಂಸ್ಥೆಗಳಿಗೆ ಹರಿದಿದೆ ಎಂದು ವರದಿಯಾಗಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
Representational image
ಸಾಂದರ್ಭಿಕ ಚಿತ್ರ
Updated on

ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಸಂಸ್ಥೆಗಳಿಗೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ತನ್ನ ಸಿಎಸ್‌ಆರ್‌ (CSR) ನಿಧಿಯನ್ನು ನೀಡಿರುವುದಾಗಿ ಆರೋಪಿಸಿರುವ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಾರ್ವಜನಿಕ ಸಂಪನ್ಮೂಲಗಳ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರಬೇಕು ಎಂದು ಆಗ್ರಹಿಸಿದ್ದಾರೆ.

ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿದ ಹರಿಪ್ರಸಾದ್, ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಸಂಸ್ಥೆಯು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ 20 ಸಂಸ್ಥೆಗಳಿಗೆ 668 ಕೋಟಿ ರೂಪಾಯಿ ಸಿಎಸ್‌ಆರ್‌ ನಿಧಿ ನೀಡಿದೆ ಎಂದು ಆರೋಪಿಸಿದರು. ಈ ವಿಷಯ ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು ಎಂದರು.

ಕಳೆದ ಒಂದು ದಶಕದಲ್ಲಿ ಒಎನ್‌ಜಿಸಿಯ 668 ಕೋಟಿ ರೂಪಾಯಿ ಸಿಎಸ್‌ಆರ್‌ ನಿಧಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ 20 ಸಂಸ್ಥೆಗಳಿಗೆ ಹರಿದಿದೆ ಎಂದು ವರದಿಯಾಗಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ದೇವಾಲಯಗಳ ಹುಂಡಿ ಹಣ, ವಿಪತ್ತು ಪರಿಹಾರ ನಿಧಿ, ಕೋವಿಡ್ ಪರಿಹಾರ ನಿಧಿ, ಸಾರ್ವಜನಿಕ ಭೂಮಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಧಿ ಸೇರಿದಂತೆ ಸಾರ್ವಜನಿಕ ಸಂಪನ್ಮೂಲಗಳನ್ನು ಸಂಘ ಪರಿವಾರದ ವ್ಯವಸ್ಥೆಗೆ ಹರಿಸಲಾಗುತ್ತಿದೆ ಎಂಬ ಆರೋಪಗಳು ಪದೇಪದೇ ಕೇಳಿಬರುತ್ತಿವೆ. ಈ ವರದಿಯನ್ನೂ ಅದೇ ಹಿನ್ನೆಲೆಯಲ್ಲಿ ನೋಡಬೇಕು ಎಂದು ಅವರು ಆರೋಪಿಸಿದರು.

ಸರ್ಕಾರದ ಅನುದಾನ ಸ್ವೀಕರಿಸುವುದಿಲ್ಲ ಎಂಬ ಆರ್‌ಎಸ್‌ಎಸ್‌ನ ಹೇಳಿಕೆಯನ್ನು ಪ್ರಶ್ನಿಸಿದ ಅವರು, ಆರ್‌ಎಸ್‌ಎಸ್‌ ಸರ್ಕಾರದ ಹಣ ಪಡೆಯುವುದಿಲ್ಲ ಎಂದು ಹೇಳುತ್ತದೆ. ಆದರೆ ಸಾರ್ವಜನಿಕ ಸಂಸ್ಥೆಗಳು ಹಾಗೂ ತೆರಿಗೆದಾರರ ಹಣದಿಂದ ಬೆಂಬಲಿತ ಸಂಪನ್ಮೂಲಗಳು ಅದರ ಅಂಗಸಂಸ್ಥೆಗಳಿಗೆ ಹರಿಯುತ್ತಿದ್ದರೆ, ಆರ್‌ಎಸ್‌ಎಸ್‌ ತಾನು ಸರ್ಕಾರದ ಹಣದಿಂದ ಸ್ವತಂತ್ರವಾಗಿದೆ ಎಂದು ಹೇಗೆ ಹೇಳಿಕೊಳ್ಳಬಹುದು ಎಂದು ಪ್ರಶ್ನಿಸಿದರು.

ಇದು ಕೇವಲ ನೋಂದಣಿ ವಿಚಾರಕ್ಕೆ ಸೀಮಿತವಾಗಿಲ್ಲ. ಸಾರ್ವಜನಿಕ ಹಣ ಹೇಗೆ ಖರ್ಚಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ನಾಗರಿಕರದ್ದು. ಪಾರದರ್ಶಕತೆ ಮತ್ತು ಉತ್ತರದಾಯಿತ್ವವೇ ಈಗ ಮುಖ್ಯ ವಿಷಯವಾಗಿದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ಗೆ ಉತ್ತರ ನೀಡುವಂತೆ ಒತ್ತಾಯಿಸಿದ ಹರಿಪ್ರಸಾದ್, ತಮ್ಮ ನಿಧಿಯ ಮೂಲ ಏನು ಮತ್ತು ನೋಂದಣಿಯಾಗದ ಸಂಘಟನೆಗೆ ಇಂತಹ ನಿಧಿ ದೊರಕುವುದು ನೈತಿಕವಾಗಿ ಸರಿಯೇ ಎಂಬ ಪ್ರಶ್ನೆಗಳಿಂದ ಆರ್‌ಎಸ್‌ಎಸ್‌ ತಪ್ಪಿಸಿಕೊಳ್ಳಬಾರದು ಎಂದು ಆಗ್ರಹಿಸಿದರು.

ಈ ಆರೋಪಗಳಿಗೆ ಸಂಬಂಧಿಸಿದಂತೆ ಒಎನ್‌ಜಿಸಿಯಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Representational image
'ಕಾಂಗ್ರೆಸ್ ಪಕ್ಷದ ಸ್ವತಂತ್ರ ಪೂರ್ವ ಹೋರಾಟದ 25 % ಕಲಿತುಕೊಂಡ್ರೆ ಖಾಕಿ ಚಡ್ಡಿ, ಕರಿ ಟೋಪಿ, ಕೈಯಲ್ಲಿ ದೊಣ್ಣೆ ಹಿಡ್ಕೊಂಡೋರು ಊರು ಬಿಟ್ಟು ಓಡಿ ಹೋಗ್ತಾರೆ': ಬಿ ಕೆ ಹರಿಪ್ರಸಾದ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com