

ಕಾಂಗ್ರೆಸ್ ಪಕ್ಷದ ಸ್ವತಂತ್ರ ಪೂರ್ವದ ಇತಿಹಾಸದ ಶೇಕಡಾ 25ರಷ್ಟು ಕೇಳಿ ಕಲಿತುಕೊಂಡರೆ ಖಾಕಿ ಚಡ್ಡಿ, ಕರಿ ಟೋಪಿ, ಕೈಯಲ್ಲಿ ದೊಣ್ಣೆ ಇಟ್ಕೊಂಡವರು ಊರು ಬಿಟ್ಟು ಓಡಿ ಹೋಗ್ತಾರೆ, ಅವರ್ಯಾರೂ ಇತಿಹಾಸವನ್ನು ಕೇಳಿದರೆ ಇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನ ಕಾಂಗ್ರೆಸ್ ಪಕ್ಷದ "ಭಾರತ್ ಜೋಡೋ" ಭವನದಲ್ಲಿ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಖಾಕಿ ಚಡ್ಡಿ, ಕರಿ ಟೋಪಿ ಹಾಕಿದವರ ಬಗ್ಗೆ ಹೇಳಲು ಧೈರ್ಯ ಮಾಡಬೇಕು, ಅವರ ಬಗ್ಗೆ ಟೀಕೆ ಮಾಡಬೇಕೆಂದಲ್ಲ, ಸರ್ವಧರ್ಮ ಸಮಬಾಳು, ಸಮಪಾಲು ಎಂಬ ಮಹಾತ್ಮಾ ಗಾಂಧಿಯವರ ತತ್ವ ಸಿದ್ಧಾಂತವನ್ನು, ತ್ರಿವರ್ಣ ಧ್ವಜವನ್ನು ಮತ್ತು ದೇಶದ ಸಂವಿಧಾನವನ್ನು ಒಪ್ಪಿಕೊಂಡರೆ ನಾವು ಅವರನ್ನು ಟೀಕೆ ಮಾಡುವುದಿಲ್ಲ, ಅವರು ನಮ್ಮ ಶತ್ರುಗಳಲ್ಲ, ನಮ್ಮ ದೇಶದ ಪ್ರಜೆಗಳೇ ಎಂದರು.
ಆದರೆ ಸ್ವತಂತ್ರ ಭಾರತದ ಸಂವಿಧಾನದ ಭದ್ರ ಬುನಾದಿ, ಪ್ರಜಾತಂತ್ರ, ಜಾತ್ಯತೀತ ತತ್ವ, ಸಿದ್ಧಾಂತ ಬಗ್ಗೆ ಆರ್ ಎಸ್ ಎಸ್ ನವರಿಗೆ ಗೌರವ ಇದ್ದರೆ ನಾವು ಅವರನ್ನು ವಿರೋಧ ಮಾಡುವುದಿಲ್ಲ ಎಂದರು.
ನನ್ನನ್ನು ಆರ್ ಎಸ್ ಎಸ್ ವಿರೋಧಿ, ಟೀಕಾಕಾರ ಎನ್ನುತ್ತಾರೆ, ಆದರೆ ಸ್ವತಂತ್ರ ಪೂರ್ವದಿಂದಲೂ ಆರ್ ಎಸ್ ಎಸ್ ನವರು ಈ ದೇಶದ ಆಶಯಗಳಿಗೆ ವಿರುದ್ಧವಾಗಿದ್ದಾರೆ. ಹೀಗಾಗಿ ನಾವು ಅವರನ್ನು ಅನಿವಾರ್ಯವಾಗಿ ವಿರೋಧ ಮಾಡಬೇಕಾಗುತ್ತದೆ ಎಂದರು.