

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಿದ್ದು, ಬರದ ಕಾರ್ಮೋಡ ಆವರಿಸಿದೆ. ಬಹುತೇಕ ಜಲಾಶಯಗಳು ಖಾಲಿಯಾಗುತ್ತಿವೆ. ಕೆಆರ್ಎಸ್ ಮತ್ತು ಕಬಿನಿ ಡ್ಯಾಂ ಸಹ ಖಾಲಿ ಖಾಲಿ ಆಗಿದ್ದು, ಕಾವೇರಿ ನದಿಯಲ್ಲಿ ನೀರಿನ ಕೊರತೆಯಿಂದ ಶಿಂಷಾದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.
ಇಡೀ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ಎಲ್ಲಾ ಕಡೆ ಬರ ಪರಿಸ್ಥಿತಿ ಆವರಿಸಿದೆ. ಬಹುತೇಕ ಜಲಾಶಯಗಳು ಖಾಲಿ ಖಾಲಿ ಆಗಿದ್ದು, ಕೇವಲ ಕುಡಿಯುವುದಕ್ಕೆ ಮಾತ್ರ ನೀರು ಬಿಡುತ್ತೇವೆ. ನೀರಾವರಿಗೆ ನೀರು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಈ ಮಧ್ಯ ಮಂಡ್ಯ ಜಿಲ್ಲೆಯ ಮಳವಳ್ಳಿಯ ಶಿಂಷಾ ಜಲ ವಿದ್ಯುತ್ ಘಟಕ ಹಾಗೂ ಏಷ್ಯಾದ ಮೊದಲ ವಿದ್ಯುತ್ ಘಟಕ ಎಂಬ ಖ್ಯಾತಿ ಪಡೆದುಕೊಂಡಿರುವ ಶಿವನಸಮುದ್ರ ಜಲ ವಿದ್ಯುತ್ ಘಟಕಗಳು ಇದೀಗ ನೀರಿನ ಕೊರತೆಯಿಂದ ಸ್ಥಗಿತಗೊಂಡಿವೆ.
ಕಳೆದ ಒಂದು ತಿಂಗಳಿಂದ ನದಿಯಲ್ಲಿ ನೀರಿಲ್ಲದೆ ವಿದ್ಯುತ್ ಉತ್ಪಾದನೆ ಸ್ಥಗಿತವಾಗಿದ್ದು, ಶಿಂಷಾ, ಶಿವನಸಮುದ್ರದ ವಿದ್ಯುತ್ ಉತ್ಪಾದನೆ ಘಟಕ ಸ್ಥಗಿತದಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗುವ ಸಾಧ್ಯತೆ ಇದೆ. ಈ ಎರಡು ಕೇಂದ್ರಗಳಲ್ಲಿ 12 ವಿದ್ಯುತ್ ಘಟಕಗಳಿದ್ದು, ವಾರ್ಷಿಕ 518 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು.
ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದಿಸುವ 10 ಘಟಕಗಳು ಇವೆ. ಇವುಗಳಿಂದ ವಾರ್ಷಿಕ 367.92 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದೇ ರೀತಿ ಶಿಂಷಾದಲ್ಲಿ ಎರಡು ಘಟಕಗಳಿದ್ದು, ಇಲ್ಲಿ ವಾರ್ಷಿಕ 150.67 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಜೂನ್ 6ರಿಂದಲೇ ಈ ಘಟಕಗಳು ಸ್ಥಗಿತಗೊಂಡಿವೆ. ಗಮನಿಸಬೇಕಾದ ಅಂಶ ಎಂದರೇ, ಎರಡು ಕೇಂದ್ರಗಳ ಕೆಲವು ಘಟಕಗಳಲ್ಲಿ ದುರಸ್ತಿ ಕಾರ್ಯ ಬಾಕಿ ಉಳಿದಿದ್ದ ಕಾರಣ ಅವುಗಳು ಹೊಂದಿದ್ದ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಆಗುತ್ತಿರಲಿಲ್ಲ.