

ಗದಗ: ಗದಗದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ (MGRDPR) ವಿದ್ಯಾರ್ಥಿನಿಲಯದಲ್ಲಿ ಗುರುವಾರ ರಾತ್ರಿ ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಗ್ರಾಮದ ವೀಣಾ ಹನುಪುರ (25ವ) ಎಂದು ಗುರುತಿಸಲಾಗಿದೆ. ಅವರು ಸಾರ್ವಜನಿಕ ಆರೋಗ್ಯ (Masters in Public Health) ಎರಡನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಸತಿ ನಿಲಯದ ತಮ್ಮ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ವೀಣಾ ಅವರ ತಂದೆ ರಾಮಪ್ಪ ಹನುಪುರ ಅವರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಪತ್ತೆಯಾಗಿದೆ ಎನ್ನಲಾದ ಡೆತ್ನೋಟ್ನಲ್ಲಿರುವ ಸಹಿ ತಮ್ಮ ಮಗಳ ಸಹಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ವೀಣಾ ಅವರ ಮುಖದ ಮೇಲೆ ಗಾಯದ ಗುರುತುಗಳಿದ್ದವು. ಅವರ ದೇಹವನ್ನು ನೆಲಮಟ್ಟದಲ್ಲೇ ನೇತುಹಾಕಲಾಗಿತ್ತು ಎಂದು ರಾಮಪ್ಪ ಆರೋಪಿಸಿದ್ದಾರೆ.
ಗುರುವಾರ ರಾತ್ರಿ ಸುಮಾರು 8.30ಕ್ಕೆ ವೀಣಾ ತಮ್ಮ ಕೊಠಡಿಗೆ ತೆರಳಿದ್ದರು. ಬಳಿಕ ಅವರು ಇತರ ವಿದ್ಯಾರ್ಥಿನಿಯರೊಂದಿಗೆ ಊಟಕ್ಕೆ ಬಂದಿರಲಿಲ್ಲ. ರಾತ್ರಿ 11 ಗಂಟೆಯಾದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸಹಪಾಠಿಗಳು ವಸತಿ ನಿಲಯದ ವಾರ್ಡನ್ಗೆ ಮಾಹಿತಿ ನೀಡಿದ್ದಾರೆ.
ನಂತರ ಕೊಠಡಿಯ ಬಾಗಿಲನ್ನು ಒಡೆದು ಒಳಗೆ ನೋಡಿದಾಗ ವೀಣಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (GIMS) ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದರು.
ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದರೆ, ಅಥವಾ ನಿಮ್ಮ ಸ್ನೇಹಿತ ಅಥವಾ ಆಪ್ತರ ಬಗ್ಗೆ ಆತಂಕವಿದ್ದರೆ, ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ನಿಮ್ಮ ಮಾತನ್ನು ಆಲಿಸಲು
ಸ್ನೇಹ ಫೌಂಡೇಶನ್: 044-24640050
ಟೆಲಿ ಮಾನಸ್ (24x7): 14416
ಐಕಾಲ್ (ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಸಹಾಯವಾಣಿ): 022-25521111 (ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಲಭ್ಯ)