

ನಂಜನಗೂಡು: ನಿಗೂಢವಾಗಿ ನಾಪತ್ತೆಯಾಗಿದ್ದ ತಾಲೂಕಿನ ಕಸುವಿನಹಳ್ಳಿಯ ವೃದ್ಧೆ ಶಿವರುದ್ರಮ್ಮ (63) ಶವವಾಗಿ ಪತ್ತೆಯಾಗಿದ್ದು, ಜಮೀನೊಂದರ ಇಂಗು ಗುಂಡಿಯಲ್ಲಿ ಮೃತ ದೇಹ ಸಿಕ್ಕಿದೆ. ಮಹದೇವಪ್ಪ ಬಂಧಿತ ವ್ಯಕ್ತಿ.
ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ 63 ವರ್ಷದ ಮಹಿಳೆಯನ್ನು ಕೊಲೆ ಮಾಡಿದ್ದ ಮಹದೇವ ಚಿರತೆಯ ನಕಲಿ ಗುರುತುಗಳನ್ನು ಸೃಷ್ಟಿಸಿ, ಕಾಡು ಪ್ರಾಣಿಗಳ ದಾಳಿಯಂತೆ ಬಿಂಬಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ.
ಶಿವರುದ್ರಮ್ಮ ಅವರು ಪೂಜೆಗಾಗಿ ಬಿಲ್ವಪತ್ರೆ ಸಂಗ್ರಹಿಸಲು ಗ್ರಾಮದ ಹೊರವಲಯದಲ್ಲಿರುವ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 70 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಧರಿಸಿದ್ದರು.
ದೇವಾಲಯದ ಆವರಣದಲ್ಲಿ ಬಿಲ್ವಪತ್ರೆ ಸಂಗ್ರಹಿಸಲು ಮಹದೇವಪ್ಪ ಅವರ ಸಹಾಯ ಪಡೆದರು. ಮಹದೇವಪ್ಪ ಬಿಲ್ವ ಪತ್ರೆ ಎಲೆಗಳನ್ನು ಸಂಗ್ರಹಿಸಲು ಸಹಾಯ ಮಾಡಿ ಹತ್ತಿರದ ಹೊಲಕ್ಕೆ ಕರೆದೊಯ್ದಿದ್ದಾನೆ. ನಂತರ ಆಕೆಯನ್ನು ಕೊಲೆ ಮಾಡಿ, ಚಿನ್ನವನ್ನು ಕದ್ದು ಇಂಗು ಗುಂಡಿಯಲ್ಲಿ ಮುಳುಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವರುದ್ರಮ್ಮ ಅವರ ಪತಿ ಗುರುಸ್ವಾಮಪ್ಪ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಮಹಾದೇವಪ್ಪ ಸಕ್ರಿಯವಾಗಿ ಭಾಗವಹಿಸಿದ್ದ. ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ ಹೀಗಾಗಿ ಮಹಿಳೆ ಚಿರತೆ ದಾಳಿಗೆ ಬಲಿಯಾಗಿರಬಹುದು ಎಂದು ಪದೇ ಪದೇ ಹೇಳುತ್ತಿದ್ದ. ಚಿರತೆಯ ಬಗ್ಗೆ ಅವನು ಪದೇ ಪದೇ ಉಲ್ಲೇಖಿಸಿದ್ದರಿಂದ ತನಿಖಾಧಿಕಾರಿಗಳಲ್ಲಿ ಅನುಮಾನ ಹುಟ್ಟಿತು.
ಹೀಗಾಗಿ ವಿಚಾರಣೆಗಾಗಿ ಅವನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ನಂತರ ಮಹದೇವಪ್ಪ ತಾನು ಹಣಕಾಸಿನ ಒತ್ತಡದಲ್ಲಿದ್ದೆ ಹೀಗಾಗಿ ಆಕೆಯ ಆಭರಣಗಳನ್ನು ಕದಿಯಲು ಮತ್ತು ಸಾಲವನ್ನು ಮರುಪಾವತಿಸಲು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆರೋಪಿಯಿಂದ 53 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement