

ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದ್ದ ಆರು ಮಂದಿಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ಮಾಹಿತಿ ನೀಡಿದ್ದು, 12 ಮಂದಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಕಲ್ಲನಗೌಡ ಪಾಟೀಲ್ ಸೇರಿ 12 ಮಂದಿಯನ್ನು ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದ ಬಳಿ ವಿಶೇಷ ಪೊಲೀಸ್ ತಂಡಗಳು ನಡೆಸಿದ ತೀವ್ರ ಶೋಧ ಕಾರ್ಯಾಚರಣೆಯ ವೇಳೆ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಹತ್ಯೆಯಾದ 6 ಮಂದಿ ಪೈಕಿ ಇಬ್ಬರನ್ನು ಕಲ್ಲನಗೌಡ ಪಾಟೀಲ್ ಹೆಸರಿನಲ್ಲಿದ್ದ ಲೈಸೆನ್ಸ್ ಹೊಂದಿದ್ದ ಡಬಲ್ ಬ್ಯಾರೆಲ್ ಗನ್ ಬಳಸಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಹತ್ಯೆಗೆ ಬಳಸಲಾಗಿರುವ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತರನ್ನು ಕಲ್ಲನಗೌಡ ಪಾಟೀಲ್, ಲಾಯಪ್ಪ ಬಿರಾದಾರ್, ಮಹಾಸಿದ್ಧ ಬಿರಾದಾರ್, ಮಹೇಶ್ ಬಿರಾದಾರ್, ರಾಜ್ಕುಮಾರ್ ಕೋಲಿ, ರಾಜು ಉಗಾರ್, ಯಲ್ಲಪ್ಪ ಅರಕೇರಿ, ಸುಭಾಸ್ ಬಿರಾದಾರ್, ರೇವಸಿದ್ದ ಬಿರಾದಾರ್, ಗಜಾನಂದ್ ಬಿರಾದಾರ್, ಮಲಕರಿ ಕೋಲಿ ಮತ್ತು ಸಂಜು ಅರಕೇರಿ ಎಂದು ಗುರುತಿಸಲಾಗಿದೆ. ಅವರಲ್ಲಿ ಕಲ್ಲನಗೌಡ ಪಾಟೀಲ್, ಲಾಯಪ್ಪ ಬಿರಾದಾರ್ ಮತ್ತು ಮಹಾಸಿದ್ಧ ಬಿರಾದಾರ್ ಎಂದು ಗುರ್ತಿಸಲಾಗಿದ್ದು, ಎಲ್ಲರ ಹೆಸರೂ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮೇ 29ರಂದು ಚಡಚಣ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ನಿರಾಳೆ ಕುಟುಂಬದ ಐವರು ಸದಸ್ಯರು ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಲಾಗಿತ್ತು.
ಮೃತರನ್ನು ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ, ಚಂದ್ರಕಾಂತ ನಿರಾಳೆ, ಸಮರ್ಥ ನಿರಾಳೆ, ರಾಹುಲ್ ನಿರಾಳೆ ಹಾಗೂ ಶಬ್ಬೀರ್ ಅತ್ತಾರ್ ಎಂದು ಗುರುತಿಸಲಾಗಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಿ ತಿಳಿಸಿದ್ದಾರೆ. ಉಳಿದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
Advertisement