

ಬೆಂಗಳೂರು/ಕೊಡಗು: ಕೊಡಗು ಜಿಲ್ಲೆಯಲ್ಲಿ ನಡೆದ ಕಾಡಾನೆ ದಾಳಿಯಿಂದಾಗಿ ಹಿರಿಯ ಐಪಿಎಸ್ ಅಧಿಕಾರಿ ಸುನಿಲ್ ಅಚಾಯ ಅವರ ಪತ್ನಿ ಸಂಧ್ಯಾ ಅಚಾಯ ಅವರು ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ನಡೆದಿದೆ,
ದಕ್ಷಿಣ ಕೊಡಗಿನ ಗೋಣಿಕೊಪ್ಪಲು ಸಮೀಪದ ಕೋನನಕಟ್ಟೆಯಲ್ಲಿರುವ ಅವರ ಸ್ವಂತ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಐವತ್ತರ ಹರೆಯದ ಸಾಂಧ್ಯಾ ಅಚಾಯ ಅವರು ತಮ್ಮ ಎಸ್ಟೇಟ್ಗೆ ಮ್ಯಾನೇಜರ್ ಹಾಗೂ ಚಾಲಕರೊಂದಿಗೆ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಆನೆ ದಾಳಿ ನಡೆಸುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಎಸ್ಟೇಟ್ ಮ್ಯಾನೇಜರ್ ಮತ್ತು ಚಾಲಕ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸಾಂಧ್ಯಾ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಆನೆ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಸುಮಾರು 10.10ರಿಂದ 10.15ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಕುರಿತು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಆನೆ ದಾಳಿ ಹೇಗೆ ನಡೆಯಿತು ಹಾಗೂ ಘಟನೆಗೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ.
ದುರ್ಘಟನೆ ಹಿನ್ನೆಲೆ ಕೊಡಗಿನಲ್ಲಿ ಮತ್ತೆ ಮಾನವ-ಪ್ರಾಮಿ ಸಂಘರ್ಷದ ಸಮಸ್ಯೆ ಚರ್ಚೆಗೆ ಬಂದಿದೆ. ನಾಗರಹೊಳೆ ಅಭಯಾರಣ್ಯದ ಸಮೀಪದಲ್ಲಿರುವ ಕಾಫಿ ತೋಟಗಳು ಹಾಗೂ ನಿವಾಸ ಪ್ರದೇಶಗಳಿಗೆ ಕಾಡಾನೆಗಳು ಆಗಾಗ್ಗೆ ನುಗ್ಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಕುಟುಂಬದ ಆಪ್ತ ಸ್ನೇಹಿತ ಎಂ.ಟಿ. ಕಾರ್ಯಪ್ಪ ಮಾತನಾಡಿ, “ಕಾಡು ಪ್ರದೇಶಗಳನ್ನು ಸರಿಯಾಗಿ ಬೇಲಿ ಹಾಕಬೇಕು. ಆನೆಗಳಿಗೆ ಕಾಡಿನಲ್ಲೇ ಸಾಕಷ್ಟು ನೀರು ಮತ್ತು ಆಹಾರ ವ್ಯವಸ್ಥೆ ಮಾಡಿದರೆ ಅವು ಮಾನವ ವಸತಿ ಪ್ರದೇಶಗಳಿಗೆ ಬರುವುದಿಲ್ಲ. ಯೂಕಲಿಪ್ಟಸ್ ಮತ್ತು ತೇಗು ಮರಗಳಿಂದ ತುಂಬಿರುವ ಅರಣ್ಯ ಪ್ರದೇಶಗಳಲ್ಲಿ ಆನೆಗಳಿಗೆ ಆಹಾರ ಸಿಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿ.ಜಿ. ರಾಜೇಂದ್ರ ಎಂಬುವವರು ಮಾತನಾಡಿ, “ಕಾಡುಜೀವಿಗಳು ತೋಟ ಪ್ರದೇಶಗಳಿಗೆ ಬಾರದಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಚಿಂತನೆ ನಡೆಸುತ್ತಿದ್ದೇನೆಂದು ಹೇಳಿದ್ದಾರೆ.
ಈ ಘಟನೆ ನಂತರ ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತ ಕಾಡಾನೆಗಳ ಚಲನವಲನದ ಮೇಲೆ ನಿಗಾ ಹೆಚ್ಚಿಸುವ ಸಾಧ್ಯತೆ ಇದ್ದು, ಅರಣ್ಯ ಗಡಿಭಾಗಗಳಲ್ಲಿ ಹೆಚ್ಚುವರಿ ಗಸ್ತು ತಿರುಗುವಿಕೆ ಕೈಗೊಳ್ಳುವ ನಿರೀಕ್ಷೆಯಿದೆ.
Advertisement