

ಬೆಂಗಳೂರು: ಸಚಿವ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವಿಶೇಷವಾಗಿ ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯ ಮೇಲೆ ಈ ಬೆಳವಣಿಗೆ ಪರಿಣಾಮ ಬೀರಬಹುದೆಂಬ ಆತಂಕ ಶುರುವಾಗಿದೆ.
ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಾಮಲಿಂಗಾ ರೆಡ್ಡಿ, ಬೆಂಗಳೂರು ಅಭಿವೃದ್ಧಿ ಖಾತೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ, ಆ ಖಾತೆಯನ್ನು ಕೃಷ್ಣ ಬೈರೇಗೌಡ ಅವರಿಗೆ ನೀಡಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರೆಡ್ಡಿಯವರ ರಾಜೀನಾಮೆ ಬೆನ್ನಲ್ಲೇ ಮತದಾರರನ್ನು ಗೆಲ್ಲುವ ಮತ್ತು ಓಲೈಸುವ ಸಾಮರ್ಥ್ಯವಿರುವ ಅನೇಕ ನಾಯಕರು ಪಕ್ಷವನ್ನು ತೊರೆಯಬಹುದಾದ್ದರಿಂದ ಸ್ಥಳೀಯ ಚುನಾವಣೆ ಮೇಲಿನ ಕಾಂಗ್ರೆಸ್ನ ನಿರೀಕ್ಷೆಗಳಿಗೆ ಹಾನಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ನ ಹಲವು ನಾಯಕರು ಮತ್ತು ಮಾಜಿ ಕಾರ್ಪೊರೇಟರ್ಗಳು ರಾಮಲಿಂಗಾ ರೆಡ್ಡ ಅವರನ್ನು ಬೆಂಗಳೂರಿನಲ್ಲಿ ಪಕ್ಷದ ಪ್ರಮುಖ ಶಕ್ತಿಯಾಗಿ ಪರಿಗಣಿಸುತ್ತಾರೆ.
ನಾವು ಕಾರ್ಪೊರೇಟರ್ಗಳಾಗಲು, ಮೇಯರ್ಗಳಾಗಲು ಮತ್ತು ಪಾಲಿಕೆಯ ವಿವಿಧ ಹುದ್ದೆಗಳಿಗೆ ಏರಲು ರೆಡ್ಡಿಯವರ ಮಾರ್ಗದರ್ಶನವೇ ಕಾರಣ. ಮುಂದೆಯೂ ಅವರ ಸೂಚನೆಯಂತೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಮಾಜಿ ಬಿಬಿಎಂಪಿ ಕಾರ್ಪೊರೇಟರ್ ಹಾಗೂ ಕಾಂಗ್ರೆಸ್ ಮಹಿಳಾ ಮುಖಂಡೆಯೊಬ್ಬರು ಮಾತನಾಡಿ, ನಗರದ ಕಸ ವಿಲೇವಾರಿ, ಹಾಳಾದ ರಸ್ತೆಗಳು ಸೇರಿದಂತೆ ಹಲವು ನಾಗರಿಕ ಸಮಸ್ಯೆಗಳು ಸರ್ಕಾರಕ್ಕೆ ಸವಾಲಾಗಲಿವೆ ಎಂದು ಹೇಳಿದ್ದಾರೆ. ಅಲ್ಲದೆ, ಬೆಂಗಳೂರಿನ ಬಹುತೇಕ ಗುತ್ತಿಗೆದಾರರು ರಾಮಲಿಂಗಾ ರೆಡ್ಡಿ ಪರವಾಗಿರುವುದರಿಂದ ಕಾಂಗ್ರೆಸ್ಗೆ ಇದರಿಂದ ರಾಜಕೀಯ ಹಿನ್ನಡೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ ಬಿಜೆಪಿ ಶಾಸಕ ಹಾಗೂ ಮಾಜಿ ಬಿಬಿಎಂಪಿ ಕಾರ್ಪೊರೇಟರ್ ಸಿಕೆ.ರಾಮಮೂರ್ತಿ, "ರಾಮಲಿಂಗಾ ರೆಡ್ಡಿಗೆ ಬೆಂಗಳೂರಿನ ಬಗ್ಗೆ ಸಂಪೂರ್ಣ ಅರಿವು ಇದೆ. ಅವರಿಗೆ ಅವಕಾಶ ನೀಡದಿರುವುದು ಕಾಂಗ್ರೆಸ್ನ ಆಂತರಿಕ ವಿಚಾರ. ಆದರೆ ಇದೊಂದೇ ಚುನಾವಣೆ ಫಲಿತಾಂಶವನ್ನು ನಿರ್ಧರಿಸುವುದಿಲ್ಲ" ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಸರ್ಕಾರದ ಕಾರ್ಯವೈಖರಿಯಿಂದ ಮತದಾರರು ಅಸಮಾಧಾನಗೊಂಡಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿ ಈ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯಲಿದ್ದು, ಬೆಂಗಳೂರಿನ ಐದು ನಗರ ಪಾಲಿಕೆಗಳ ಪೈಕಿ ಕನಿಷ್ಠ ನಾಲ್ಕರಲ್ಲಿ ಜಯ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
Advertisement